ತುಮಕೂರು: ವರದಕ್ಷಿಣೆಗಾಗಿ ಕಿರುಕುಳ ನೀಡಿದ ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ಹೋಬಳಿಯ ಕೆಂಕೆರೆ ಗ್ರಾಮದ ಅನಂತ್, ಆತನ ತಂದೆ ಮಹದೇವಯ್ಯ, ತಾಯಿ ಶಿವಮ್ಮ ಹಾಗೂ ಸಹೋದರ ಶಾಂತರಾಜುವಿಗೆ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲವು 7 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಕೆಂಕೆರೆಯ ತಿಮ್ಮಯ್ಯ ಅವರ ಪುತ್ರಿ ಸುನಿತಾ ಅವರನ್ನು ಅನಂತ್ ಪ್ರೀತಿಸಿ ವಿವಾಹವಾಗಿದ್ದ. ಮದುವೆಯಾದ ಆರು ತಿಂಗಳ ನಂತರ ವರದಕ್ಷಿಣೆ ತರುವಂತೆ ಸುನಿತಾ ಅವರಿಗೆ ಈ ನಾಲ್ಕು ಮಂದಿ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡಿದ್ದರು. ಇದರಿಂದ ನೊಂದು 2010ರ ಆಗಸ್ಟ್ನಲ್ಲಿ ಸುನಿತಾ ಪತಿಯ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಅಂದಿನ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸುನಿತಾ ತಂದೆ ತಿಮ್ಮಯ್ಯ ಅವರಿಗೆ ಪರಿಹಾರ ನೀಡುವಂತೆ ನ್ಯಾಯಾಧೀಶರಾದ ದೇಶಪಾಂಡೆ ಗೋವಿಂದರಾಜ್ ಎಸ್. ಆದೇಶಿಸಿದ್ದಾರೆ.