ತಿಪಟೂರು: ತಾಲ್ಲೂಕಿನಲ್ಲಿ ಗೌರಿ, ಗಣೇಶ ಮೂರ್ತಿಗಳಿಗೆ ಬೇಡಿಕೆ ಕುಸಿದಿದ್ದು, ವ್ಯಾಪಾರಿಗಳ ಆತಂಕಕ್ಕೆ ಕಾರಣವಾಗಿದೆ.
ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದ್ದ ಗಣಪತಿ ಹಬ್ಬ ಎರಡು ವರ್ಷಗಳಿಂದ ಕೋವಿಡ್ನಿಂದಾಗಿ ಕಳೆಗುಂದಿದೆ.
ತಾಲ್ಲೂಕಿನಲ್ಲಿ ಬುಧವಾರ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನರು, ಗೌರಿ-ಗಣೇಶ ಮೂರ್ತಿಗಳ ಖರೀದಿಗೆ ಹಿಂದೇಟು ಹಾಕಿದ್ದಾರೆ. ಈ ಬಾರಿ ಸರ್ಕಾರವೂ ಅನೇಕ ಷರತ್ತು ವಿಧಿಸಿ, ಹಬ್ಬ ಆಚರಣೆಗೆ ಅನುಮತಿ ನೀಡಿದೆ. ಆದಾಗ್ಯೂ ಅನೇಕರು ಗಣಪತಿ ಕೂರಿಸಲು ಹಿಂದೇಟು ಹಾಕಿದ್ದಾರೆ.
ಗೌರಿ-ಗಣೇಶ ಮೂರ್ತಿ ತಯಾರಕರು ಮೂರ್ತಿಗಳನ್ನು ಮಾರಾಟಕ್ಕೆ ತಂದಿಟ್ಟಿದ್ದು, ಗ್ರಾಹಕರಿಗಾಗಿ ಎದುರು ನೋಡುವಂತಾಗಿದೆ. ಇನ್ನೂ ಕೆಲವರು ಕಡಿಮೆ ಬಜೆಟ್ನಲ್ಲಿ ಹಬ್ಬ ಆಚರಣೆಗೆ ಮುಂದಾಗಿದ್ದಾರೆ.
ಕೊರೊನಾ ಸಂಕಷ್ಟವು ಅನೇಕ ವರ್ತಕರು, ಕುಂಬಾರರ ಪಾಲಿಗೆ ಸವಾಲಾಗಿ ಪರಿಣಮಿಸಿದೆ.
‘ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರ ಅನೇಕ ಷರತ್ತುಗಳನ್ನು ವಿಧಿಸಿದೆ. ಮನೆಯಲ್ಲಿಯೇ ಪ್ರತಿಷ್ಠಾಪಿಸುವ ಸಲುವಾಗಿ ಕಡಿಮೆ ಎತ್ತರದ ಮೂರ್ತಿಗಳನ್ನು ಮಾಡಲಾಗಿದೆ. ಆದಾಗ್ಯೂ ಈ ಬಾರಿ ವಿಗ್ರಹ ಖರೀದಿಸುವವರ ಸಂಖ್ಯೆ ವಿರಳವಾಗಿದೆ’ ಎಂದು ಮೂರ್ತಿ ತಯಾರಕ ಕಾಂತಣ್ಣ ಹೇಳಿದರು.