ತುಮಕೂರು: ಅರ್ಜುನ ಆನೆ ಸಾವಿನ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಗಂಧದಗುಡಿ ಫೌಂಡೇಶನ್ ವತಿಯಿಂದ ಪ್ರತಿಭಟನೆ ನಡೆಯಿತು.
‘ಮೈಸೂರು ದಸರಾ ಅಂಬಾರಿ ಹೊರುತ್ತಿದ್ದ ಅರ್ಜುನ ಆನೆ ನಾಡಿನ ಜನರ ಪ್ರೀತಿ ಗಳಿಸಿತ್ತು. ವಯಸ್ಸಾಗಿದ್ದ ಆನೆಯನ್ನು ಕಾಡಾನೆಗಳನ್ನು ಪಳಗಿಸಲು ಬಳಸಿದ್ದು ಅಮಾನವೀಯ. ಕಾರ್ಯಾಚರಣೆ ಸಮಯದಲ್ಲಿ ಅರ್ಜುನ ಆನೆಗೆ ಗುಂಡು ಬಿದ್ದಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಕುರಿತು ನಿಖರವಾಗಿ ತನಿಖೆ ನಡೆಸಬೇಕು’ ಎಂದು ಫೌಂಡೇಶನ್ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ರೆಡ್ಡಿ ಒತ್ತಾಯಿಸಿದರು.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೂಡಲೇ ಇತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿ ಉಪವಿಭಾಗಾಧಿಕಾರಿ ಗೌರವ್ಕುಮಾರ್ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಫೌಂಡೇಷನ್ ಗೌರವಾಧ್ಯಕ್ಷ ಬಿ.ಎಸ್.ಪ್ರಕಾಶ್, ಉಪಾಧ್ಯಕ್ಷ ರಾಘವೇಂದ್ರ, ಕಾರ್ಯದರ್ಶಿ ಮೋಹನ್ಕುಮಾರ್, ಖಜಾಂಚಿ ಚಂದ್ರಶೇಖರ್, ಪದಾಧಿಕಾರಿಗಳಾದ ನವೀನ್ಕುಮಾರ್, ಜಿ.ಎಸ್.ಗೌಡ, ಈರಣ್ಣ, ಲೋಹಿತ್, ಪ್ರಕಾಶ್, ಮಧು, ನೀಲಕಂಠಪ್ಪ, ಯೋಗೇಶ್ ಇತರರು ಪಾಲ್ಗೊಂಡಿದ್ದರು.