ಪಾವಗಡ: ‘ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸಿದಲ್ಲಿ ತಾಲ್ಲೂಕಿನ ಜನರು ಹಿಡಿಶಾಪ ಹಾಕುತ್ತಾರೆ’ ಎಂದು ಶಾಸಕ ವೆಂಕಟರಮಣಪ್ಪ ಬೇಸರ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಕನ್ನಿಕಾ ಪರಮೇಶ್ವರಿ ದೇಗುಲ ರಸ್ತೆ, ವೇಣುಗೋಪಾಲಸ್ವಾಮಿ ರಾಜ ಬೀದಿ ರಸ್ತೆ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಪಟ್ಟಣದ ತುಮಕೂರು ರಸ್ತೆಯಲ್ಲಿ ವಸತಿ ನಿಲಯ ಕಟ್ಟಡ ಕಾಮಗಾರಿಗೆ ಮಾಜಿ ಶಾಸಕ ತಿಮ್ಮರಾಯಪ್ಪ ಅಡ್ಡಿಪಡಿಸುತ್ತಿರುವುದು ಪ್ರಚಾರಕ್ಕಾಗಿ. ಹಿಂದಿನಿಂದಲೂ ಇಂತಹ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಸುಮಾರು ₹26 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಸತಿ ನಿಲಯ ಕಾಮಗಾರಿ ಸ್ಥಗಿತಗೊಂಡು ಅನುದಾನ ಸರ್ಕಾರಕ್ಕೆ ಮರಳಿಸಿದರೆ ಸಾವಿರಾರು ವಿದ್ಯಾರ್ಥಿಗಳು ಸೌಲಭ್ಯದಿಂದ ವಂಚಿತರಾಗುತ್ತಾರೆ’ ಎಂದು ಆರೋಪಿಸಿದರು.
ವಸತಿ ನಿಲಯ ನಿರ್ಮಾಣವಾದರೆ ಮುಕ್ತಧಾಮಕ್ಕೆ ಸಮಸ್ಯೆಯಾಗುತ್ತದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಮುಕ್ತಿಧಾಮಕ್ಕೆ ಎತ್ತರವಾದ ಗೋಡೆ ನಿರ್ಮಿಸಿರುವುದರಿಂದ ವಸತಿ ನಿಲಯಕ್ಕೆ ಸಮಸ್ಯೆಯಾಗುವುದಿಲ್ಲ. ಮುಕ್ತಧಾಮಕ್ಕೂ ಯಾವುದೇ ಅಡ್ಡಿಯಾಗುವುದಿಲ್ಲ. ಇಂತಹ ಅಪಪ್ರಚಾರಗಳಿಗೆ ಕಿವಿಗೊಡಬೇಡಿ ಎಂದರು.
ನೀರಾವರಿ ಯೋಜನೆ ಪೈಪ್ಲೈನ್ ರಸ್ತೆ ಬದಿ ಹಾಕಬಾರದು ಜಮೀನುಗಳಲ್ಲಿ ಹಾಕಬೇಕು ಎಂದು ಮಾಜಿ ಶಾಸಕರು ಆಕ್ಷೇಪಿಸಿದ್ದರು. ಜಮೀನಿನಲ್ಲಿ ಹಾಕಲು ರೈತರು ಬಿಡದೆ, ನ್ಯಾಯಾಲಯದ ಮೊರೆ ಹೋದಲ್ಲಿ ಕಾಮಗಾರಿ ಸ್ಥಗಿತಗೊಂಡು ತಾಲ್ಲೂಕಿನ ಜನರು ನೀರಾವರಿ ಯೋಜನೆಗಳಿಂದ ವಂಚಿತರಾಗುತ್ತಿದ್ದರು. ಇಂತಹ ಯಾವುದೇ ಅಡ್ಡಿ ಆತಂಕಗಳು ಬಂದರೂ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ತಾಲ್ಲೂಕಿನ ಜನರ ಹಿತಾಸಕ್ತಿಯಷ್ಟೇ ಮುಖ್ಯ ಎಂದರು.
ಮುಖಂಡರಾದ ಪ್ರಭಾಕರ್, ಅಶೋಕ್, ಎಸ್ಎಸ್ಕೆ ಸಂಘದ ಅಧ್ಯಕ್ಷ ಶ್ರೀನಿವಾಸ್, ನಿರ್ದೇಶಕ ಅನಿಲ್, ಷಾ ಬಾಬು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.