ಪಾವಗಡ: ‘ಜನಸಾಮಾನ್ಯರಿಗೆ ಸರ್ಕಾರದ ಸೇವೆ ತಲುಪಿಸುವ ಸೇವಾ ಕೇಂದ್ರದ ಕಾರ್ಯ ಶ್ಲಾಘನೀಯವಾದುದು’ ಎಂದು ಪೊಲೀಸ್ ಇನ್ಸ್ಪೆಕ್ಟರ್ ಲಕ್ಷ್ಮಿಕಾಂತ್ ತಿಳಿಸಿದರು.
ಪಟ್ಟಣದಲ್ಲಿ ಬುಧವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಸೇವಾ ಕೇಂದ್ರಗಳಿಗೆ ಲ್ಯಾಪ್ಟಾಪ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಹಿತಿ ಮತ್ತು ತಂತ್ರಜ್ಞಾನದ ನೆರವಿನಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮಗಳ ಜನತೆಗೆ ಅನುಕೂಲವಾಗುವಂತೆ ಸರ್ಕಾರಗಳು ಸೇವೆ ಆರಂಭಿಸಿವೆ. ಆಧಾರ್, ಪಹಣಿ ಸೇರಿದಂತೆ ಅಗತ್ಯ ದಾಖಲೆ ಪಡೆಯಲು, ವಿವಿಧ ಇಲಾಖೆಯ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಸಂಸ್ಥೆ ಆರಂಭಿಸಿರುವ ಸೇವಾ ಕೇಂದ್ರಗಳಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.
ತಾಲ್ಲೂಕು ಸಂಯೋಜನಾಧಿಕಾರಿ ನಂಜುಂಡಿ, ದಾಖಲೆಗಳನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ, ತ್ವರಿತವಾಗಿ ಸ್ಥಳೀಯವಾಗಿ ಪಡೆಯಲು ಸೇವಾ ಕೆಂದ್ರಗಳಲ್ಲಿ ಅವಕಾಶವಿದೆ. ಇದು ಸಂಸ್ಥೆಯ ಮಹತ್ತರ ಯೋಜನೆಯಾಗಿದೆ ಎಂದು ಹೇಳಿದರು.
ಎಲ್ಲಾ ಕಾರ್ಯಕರ್ತರು ನಿಷ್ಠೆಯಿಂದ ಕೆಲಸ ಮಾಡಿ ಯೋಜನೆಯು ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಸಂಯೋಜಕ ರಾಜಗೋಪಾಲ್, ಜಿಲ್ಲಾ ಸಮನ್ವಯಾಧಿಕಾರಿ ಲೋಕೇಶ್, ಚೈತನ್ಯ, ಪುಷ್ಪರಾಜ್, ಗಣೇಶ್, ಮಂಜಪ್ಪ, ಚಿಕ್ಕನಾಗಪ್ಪ, ತಾಲ್ಲೂಕು ನೋಡಲ್ ಅಧಿಕಾರಿ ರವಿಕುಮಾರ್ ಉಪಸ್ಥಿತರಿದ್ದರು.