ಪಾವಗಡ: ತಾಲ್ಲೂಕಿನ ಹೆಚ್ಚಿನ ಕೆರೆಗಳನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಸೇರಿಸಬೇಕು. ತಾಲ್ಲೂಕಿಗೆ 2 ಟಿಎಂಸಿ ಅಡಿ ನೀರು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ಹಸಿರು ಸೇನೆ ಪದಾಧಿಕಾರಿಗಳು ಭಾನುವಾರ ಶಾಸಕ ವೆಂಕಟರಮಣಪ್ಪ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ರೈತರು ಮಳೆ, ಬೆಳೆ ಇಲ್ಲದೆ ಜೀವನಕ್ಕಾಗಿ ಮಕ್ಕಳೊಂದಿಗೆ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಫ್ಲೋರೈಡ್ ಸಮಸ್ಯೆಯಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳಲ್ಲಿ ನೀರು ಬತ್ತುತ್ತಿದೆ. ಹೀಗಾಗಿ ಸಂಕಷ್ಟದಲ್ಲಿದ್ದಾರೆ ಎಂದು ತಿಳಿಸಿದರು.
ತಾಲ್ಲೂಕಿನ 34 ಕೆರೆಗಳನ್ನು ಯೋಜನೆಗೆ ಸೇರಿಸಲಾಗಿದೆ. ಗುಂಡ್ಲಹಳ್ಳಿ, ಚಿಕ್ಕಕೆರೆ, ಮುಗದಾಳಬೆಟ್ಟ, ತಿಪ್ಪಯ್ಯನಕೆರೆ ಸೇರಿದಂತೆ ಇನ್ನೂ ಹೆಚ್ಚಿನ ಕೆರೆಗಳನ್ನು ಸೇರಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಅರ್ಧ ಟಿಎಂಸಿ ಅಡಿ ನೀರು ತಾಲ್ಲೂಕಿಗೆ ಸಾಕಾಗುವುದಿಲ್ಲ. ಕನಿಷ್ಠ 2 ಟಿಎಂಸಿ ನೀರು ಹಂಚಿಕೆ ಮಾಡಲು ಸಚಿವರು, ಮುಖ್ಯಮಂತ್ರಿಗಳಿಗೆ ಒತ್ತಡ ಹಾಕಬೇಕು ಎಂದು ಮನವಿ ಮಾಡಿದರು.
ಕೋವಿಡ್ನಿಂದ ಸಂಕಷ್ಟದಲ್ಲಿರುವ ರೈತರ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಬೇಕು. ಭದ್ರಾ ಮೇಲ್ದಂಡೆ ಯೋಜನೆಯಡಿ ಹೆಚ್ಚಿನ ಕೆರೆಗಳಿಗೆ ನೀರು ಹರಿಸಬೇಕು. ಕನಿಷ್ಠ 2 ಟಿಎಂಸಿ ಅಡಿ ನೀರು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ, ಪದಾಧಿಕಾರಿಗಳಾದ ನಾರಾಯಣಪ್ಪ, ನಡಪನ್ನ, ರಾಮಾಂಜಿ, ನರಸಣ್ಣ, ಹನುಮಂತರಾಯಪ್ಪ, ಪಾಂಡು ರಂಗಪ್ಪ, ಶನಿವಾರಪ್ಪ, ಶಿವರಾಜು ಇದ್ದರು.