ಚಿಕ್ಕನಾಯಕನಹಳ್ಳಿ: ಬಡವರಿಗೆ ವಿತರಿಸುವ ಪಡಿತರದ ತೂಕದಲ್ಲಿ ಮೋಸ ಮಾಡುತ್ತಿದ್ದು, 7ರಿಂದ 8 ಕ್ವಿಂಟಲ್ ಅಕ್ಕಿ ಕಡಿಮೆ ಇರುತ್ತದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಸಿಂಗದಹಳ್ಳಿ ರಾಜ್ಕುಮಾರ್ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಗೋಧಿ ತೂಕದಲ್ಲೂ ಮೋಸ ನಡೆಯುತ್ತಿರುವ ಬಗ್ಗೆ ದೂರುಗಳಿವೆ ಎಂದರು. ಇದಕ್ಕೆ ಬಹುತೇಕ ಸದಸ್ಯರು ಧ್ವನಿ ಗೂಡಿಸಿದರು.
ಸದಸ್ಯೆ ಗಂಗಮ್ಮ ಚಂದ್ರಶೇಖರ್, ‘ಭೈರಾಪುರ ತಾಂಡದಲ್ಲಿ 15 ಜನರಿಗೆ ಪಡಿತರ ಚೀಟಿ ಇಲ್ಲ ಎಂದರು.
ಆಹಾರ ನಿರೀಕ್ಷಕ ಕಿರಣ್ ಕುಮಾರ್ ‘ಆಹಾರ ಧಾನ್ಯ ವಿತರಣೆಯ ಕುರಿತ ದೂರುಗಳ ಬಗ್ಗೆ ಪರಿಶೀಲಿಸುವುದಾಗಿ ಹೇಳಿದರು. ಸದಸ್ಯ ಆಲದಕಟ್ಟೆ ತಿಮ್ಮಯ್ಯ, ‘ಕೋವಿಡ್-19 ತಾಲ್ಲೂಕಿನಲ್ಲಿ ಹರಡುತ್ತಿದ್ದರೂ ಬ್ಯಾಂಕ್ಗಳಲ್ಲಿ ಮುಂಜಾಗೃತ ಕ್ರಮ ವಹಿಸುತ್ತಿಲ್ಲ. ಬ್ಯಾಂಕ್ಗಳಿಗೆ ಹೆಚ್ಚಿನ ಜನರು ಬರುತ್ತಾರೆ. ಇಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಉಪಯೋಗವಾಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುತ್ತಿಲ್ಲ. ಹೆರಿಗೆಗಾಗಿ ಬಂದವರನ್ನು ಬೇರೆ ಕಡೆ ಕಳುಹಿಸುತ್ತಿದ್ದಾರೆ ಎಂದು ದೂರಿದರು.
ತಾಲ್ಲೂಕಿನ ವಿವಿಧೆಡೆ ಹೆಚ್ಚುತ್ತಿರುವ ಕಳ್ಳತನಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಕಳ್ಳತನ ಹೆಚ್ಚಿರುವ ಕಡೆ ಪೊಲೀಸ್ ಗಸ್ತು ಹೆಚ್ಚಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.