ತುಮಕೂರು: ಕೇಂದ್ರ ಸರ್ಕಾರ ಸಹಕಾರ ಸಂಸ್ಥೆಗಳ ಮೇಲೆ ಆದಾಯ ತೆರಿಗೆ, ಟಿಡಿಎಸ್ ಹಾಗೂ ಜಿಎಸ್ಟಿ ವಿಧಿಸಿರುವುದನ್ನು ಖಂಡಿಸಿ ಕರ್ನಾಟಕ ಸ್ಟೇಟ್ ಕೋ-ಆಪರೇಟಿವ್ ಸೊಸೈಟಿ ಅಸೋಸಿಯೇಷನ್ನಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ರಾಜ್ಯ ಸಂಚಾಲಕ ಕೆ.ಎನ್.ಮಂಜುನಾಥ್, ದೇಶದ ಕೃಷಿಕರು, ದೇಶದ ಆರ್ಥಿಕ ವ್ಯವಸ್ಥೆಗೆ ಅತ್ಯಮೂಲ್ಯ ಕೊಡುಗೆ ನೀಡಿರುವ ಸಹಕಾರಿ ಕ್ಷೇತ್ರದ ಮೇಲೆ ಕೇಂದ್ರ ಸರ್ಕಾರ ಕ್ರಮ ಆಕ್ರಮಣಕಾರಿ ಆಗಿದೆ ಎಂದರು.
ಸಹಕಾರ ಕ್ಷೇತ್ರದ ಮೇಲೆ ನಿಯಂತ್ರಣ ಹಾಕುವ ಮೂಲಕ ಕ್ಷೇತ್ರದ ಬೆಳವಣಿಗೆ ಕುಂಠಿತವಾಗುತ್ತಿದೆ. ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರದ ಮೇಲೆ ಪ್ರಹಾರ ಮಾಡುವುದನ್ನು ನಿಲ್ಲಿಸಬೇಕು. ಕೇಂದ್ರ ಸರ್ಕಾರದ ಈ ನೀತಿಯಿಂದ ರಾಷ್ಟ್ರದಲ್ಲಿರುವ 52 ಸಾವಿರ ಸಹಕಾರ ಸಂಸ್ಥೆಗಳ ಬೆಳವಣಿಗೆಗೆ ತೊಂದರೆ ಆಗಲಿದೆ ಎಂದು ದೂರಿದರು.
ಸಾಮಾನ್ಯ ಜನರಲ್ಲಿಯೂ ಉಳಿತಾಯ ಮನೋಭಾವನೆ ಪ್ರೇರೇಪಿಸುವುದಕ್ಕಾಗಿ ಹುಟ್ಟಿಕೊಂಡ ಸಹಕಾರಿ ಕ್ಷೇತ್ರದ ಮೇಲೆ ಕೇಂದ್ರ ಸರ್ಕಾರ ಒಂದರ ಮೇಲೊಂದು ಪ್ರಹಾರ ಮಾಡುತ್ತಿದೆ. ಆದಾಯ ತೆರಿಗೆ, ಟಿಡಿಎಸ್, ಜಿಎಸ್ಟಿ ಮೂಲಕ ಸಹಕಾರಿ ಬೆಳವಣಿಗೆಗೆ ಮಾರಕವಾಗುವಂತಹ ಕಾನೂನು ಜಾರಿಗೆ ತಂದಿದೆ ಎಂದರು.
ಸಹಕಾರಿ ಕೇತ್ರದ ಮೇಲೆ ವಿಧಿಸಿರುವ ಆದಾಯ ತೆರಿಗೆ, ಟಿಡಿಎಸ್, ಜಿಎಸ್ಟಿಯನ್ನು ಕೇಂದ್ರ ಸರ್ಕಾರ ಹಿಂಪಡೆಯುವ ಮೂಲಕ ಸಹಕಾರಿ ಕ್ಷೇತ್ರಗಳ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲಾಯಿತು.
ವಿವಿಧ ಸಹಕಾರಿ ಸಂಸ್ಥೆಗಳ ಅರುಣ್ಕುಮಾರ್, ಶ್ರೀದೇವಿ, ಮಂಜುನಾಥ್, ಜಯಶ್ರೀ, ವಾಸವಿಗುಪ್ತ, ನರಸಿಂಹಯ್ಯ, ಡಾ.ಮುದ್ದುಕೃಷ್ಣ, ರಾಮಕೃಷ್ಣಪ್ಪ ಇದ್ದರು.