ತುಮಕೂರು: ‘ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಎಲ್ಲ ಶಾಲೆಗಳ ಆವರಣದಲ್ಲೂ ಶಿಕ್ಷಕರು ಕಡ್ಡಾಯವಾಗಿ ಕೈತೋಟ ಬೆಳೆಸಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಆರ್.ಕಾಮಾಕ್ಷಿ ಸೂಚಿಸಿದರು.
ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ, ವೃತ್ತಿ ಶಿಕ್ಷಣ ಶಿಕ್ಷಕರ ಸಂಘದ ತುಮಕೂರು ದಕ್ಷಿಣ ಜಿಲ್ಲಾ ಘಟಕವು ಮಂಗಳವಾರ ಡಯಟ್ನಲ್ಲಿ ಆಯೋಜಿಸಿದ್ಧ ಜಿಲ್ಲಾ ವೃತ್ತಿ ಶಿಕ್ಷಣ ಶಿಕ್ಷಕರ ಕಾರ್ಯಾಗಾರದಲ್ಲಿ ಮಾತನಾಡಿದರು.
‘ಶಾಲೆಗಳಲ್ಲಿ ಶಿಕ್ಷಕರು ಪಠ್ಯೇತರ ಚಟುವಟಿಕೆಗಳನ್ನು ಹೆಚ್ಚು ಹಮ್ಮಿಕೊಳ್ಳಬೇಕು. ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಕೈ ತೋಟ ಬೆಳೆಸುವ ಮೂಲಕ ಗಿಡಗಳ ಸಂರಕ್ಷಣೆ, ಪರಿಸರ ಜಾಗೃತಿ ಮೂಡಿಸಬೇಕು’ ಎಂದರು.
ಡಯಟ್ ಉಪನಿರ್ದೇಶಕಿ ನಾಗಮಣಿ, ‘ಶಿಕ್ಷಕರು ಮಕ್ಕಳ ಜೀವನ ಪರಿವರ್ತಿಸಬೇಕು. ಮಕ್ಕಳಲ್ಲಿ ಚಿಂತನೆ ಮೂಡಿಸುವ ಶಿಕ್ಷಣವನ್ನು ಶಿಕ್ಷಕರು ನೀಡಬೇಕು’ ಎಂದು ತಿಳಿಸಿದರು
ವೃತ್ತಿ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಎಚ್.ಸಿ.ಸತ್ಯಪ್ರಕಾಶ್, ‘ವೃತ್ತಿ ಶಿಕ್ಷಕರು ಮಕ್ಕಳು ಶಿಕ್ಷಣದ ಜೊತೆಗೆ ತೋಟಗಾರಿಕೆ, ಸಂಗೀತ, ಚಿತ್ರಕಲೆ, ಹೊಲಿಗೆ, ಕೃಷಿ ಸೇರಿದಂತೆ ಮತ್ತಿತರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪ್ರೇರೇಪಿಸಬೇಕು’ ಎಂದು ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಶಿವಾನಂದ, ‘ವೃತ್ತಿ ಶಿಕ್ಷಕರನ್ನು ಹೆಚ್ಚಾಗಿ ಎಲ್ಲ ವಿದ್ಯಾರ್ಥಿಗಳು ಪ್ರೀತಿಸುತ್ತಾರೆ. ಯಾಕೆಂದರೆ ವಿದ್ಯಾರ್ಥಿಗಳು ಮೆಚ್ಚುವ ಹಲವು ಹವ್ಯಾಸಗಳನ್ನು, ಜೀವನಕೌಶಲಗಳನ್ನು ಕಲಿಸುವವರು ವೃತ್ತಿ ಶಿಕ್ಷಕರು’ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಕುಂ.ಸಿ.ಸದಾಶಿವಯ್ಯ, ನಯಾಜ್ ಅಹಮ್ಮದ್ ಮಾತನಾಡಿದರು. ನಿವೃತ್ತ ಮುಖ್ಯ ಶಿಕ್ಷಕ ಮಂಜುನಾಥ್, ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ಎಲ್.ವೆಂಕಟೇಶ್, ಸಂಘದ ಮಾಜಿ ಅಧ್ಯಕ್ಷ ಮಂಜುನಾಥ್, ರಾಜ್ಯ ಪ್ರತಿನಿಧಿ ಆರ್.ಬೋರಪ್ಪ, ಜಿ.ಡಿ.ಗಂಗಾಧರ್, ಎಚ್.ಇ.ವಿಜಯ್, ಎಚ್.ಎನ್.ವಿಮಲ ಇದ್ದರು.