ತುಮಕೂರು: ಹೇಮಾವತಿ ವಿಷಯದಲ್ಲಿ ಜಿಲ್ಲೆಗೆ ಆಗಿರುವ ಅನ್ಯಾಯದ ವಿರುದ್ಧ ಉಗ್ರವಾಗಿ ಪ್ರತಿಭಟಿಸುವ ಸಮಯ ಕೂಡಿ ಬಂದಿದೆ ಎಂದು ಮಾಜಿ ಶಾಸಕ ಬಿ.ಸುರೇಶ್ಗೌಡ ತಿಳಿಸಿದರು.
ನಗರದ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಗುಬ್ಬಿ ಮತ್ತು ತುಮಕೂರು ಗ್ರಾಮಾಂತರ ಕ್ಷೇತ್ರದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
’ಜಿಲ್ಲೆಗೆ ಹೇಮಾವತಿ ನೀರು ಹರಿಸುವ ವಿಷಯದಲ್ಲಿ ಎಚ್.ಡಿ.ದೇವೇಗೌಡರ ಕುಟುಂಬ ಮಾಡಿರುವ ಅನ್ಯಾಯವನ್ನು ಪ್ರತಿ ಹಳ್ಳಿಯ ಮನೆ ಮನೆಗೂ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು’ ಎಂದು ಕರೆ ನೀಡಿದರು.
ಎಚ್.ಡಿ.ದೇವೇಗೌಡ ಅವರು ತುಮಕೂರು ಜಿಲ್ಲೆಗೆ ಬಂದರೆ ಹೇಮಾವತಿ ನೀರು ಶಾಶ್ವತವಾಗಿ ಬಂದ್ ಆಗಲಿದೆ. ಈಗಾಗಲೇ ಅನುಭವಕ್ಕೆ ಬಂದಿದೆ. 8 ಟಿಎಂಸಿ ನೀರು ಹರಿಯುವ ಹಾಸನ ಜಿಲ್ಲೆಯ ಎಲ್ಲ ಕೆರೆಗಳು ತುಂಬುತ್ತವೆ. ಆದರೆ, 24 ಟಿಎಂಸಿ ನೀರು ಅನುಮತಿ ಪಡೆದಿರುವ ಜಿಲ್ಲೆಯಲ್ಲಿ ಕರೆಗಳು ಬತ್ತಿಹೋಗಿರುವುದೇ ಇದಕ್ಕೆ ನಿದರ್ಶನ ಎಂದು ಬಿ.ಸುರೇಶ್ ಗೌಡ ತಿಳಿಸಿದರು.
‘ಜಿಲ್ಲೆಗೆ ಜೆಡಿಎಸ್ ವರಿಷ್ಠ ದೇವೇಗೌಡ ಅಲ್ಲ ಮುಖ್ಯಮಂತ್ರಿ ಕುಮಾರಸ್ವಾಮಿಯೇ ಬರಲಿ ಪಕ್ಷದ ಕಾರ್ಯಕರ್ತರು ಎದೆಗಾರಿಕೆಯಿಂದ ಚುನಾವಣೆ ಮಾಡಬೇಕು. ದೇವೇಗೌಡರ ಸಮಕಾಲಿನ ರಾಜಕಾರಣಿ ಆಗಿರುವ ಮಾಜಿ ಸಂಸದ ಜಿ.ಎಸ್ ಬಸವರಾಜ್ ಕೂಡಾ ರಾಜಕಾರಣದಲ್ಲಿ ಅನುಭವಿಗಳು. ಉತ್ತಮ ಸಂಸದೀಯ ಪಟು’ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸೋಮಣ್ಣ, ಅಭ್ಯರ್ಥಿ ಜಿ.ಎಸ್.ಬಸವರಾಜ್, ಶಾಸಕರಾದ ಜೆ.ಸಿ. ಮಾಧುಸ್ವಾಮಿ, ಬಿ.ಸಿ.ನಾಗೇಶ್, ಮಸಾಲೆ ಜಯರಾಂ, ಜಿ.ಬಿ.ಜ್ಯೋತಿಗಣೇಶ್, ಮುಖಂಡರಾದ ಡಾ.ಎಂ.ಆರ್. ಹುಲಿನಾಯ್ಕರ್, ಹುಚ್ಚಯ್ಯ, ಬೆಟ್ಟಸ್ವಾಮಿ, ಗೋಪಾಲಗೌಡ, ವಿಜಿಯಣ್ಣ, ಲಕ್ಷ್ಮೀಶ, ನಂದೀಶ ಹಾಗೂ ಶಿವಪ್ರಸಾದ ಇದ್ದರು.