ತುರುವೇಕೆರೆ: ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿನ ಮೆಟ್ರಿಕ್ ನಂತರದ ಸರ್ಕಾರಿ ಹಾಸ್ಟೆಲ್ನಲ್ಲಿ ಮೂಲ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಈ ಹಾಸ್ಟೆಲ್ನಲ್ಲಿ ತಾಲ್ಲೂಕಿನ ಸರ್ಕಾರಿ ಡಿಪ್ಲೋ ಪಾಲಿಟೆಕ್ನಿಕ್ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಕೈಗಾರಿ ತರಬೇತಿ ಕೇಂದ್ರ ಮತ್ತು ಪಟ್ಟಣದ ವಿವಿಧ ಪಿಯು ಕಾಲೇಜುಗಳಿಗೆ ಸೇರಿದ ಹಾಗೂ ಬೇರೆ ಜಿಲ್ಲೆಗಳಿಂದ ಬಂದ ಸುಮಾರು 50 ವಿದ್ಯಾರ್ಥಿಗಳು ಇದ್ದಾರೆ.
ಈ ನಿಲಯದ ವಾರ್ಡನ್ ಹಾಸ್ಟೆಲ್ ವಿದ್ಯಾರ್ಥಿಗಳಿಂದ ಶೌಚಾಲಯಗಳನ್ನು ಸ್ವಚ್ಛ ಮಾಡಿಸುತ್ತಾರೆ. ಅಲ್ಲದೆ ಶೌಚಾಲಯವನ್ನು ನಿಯಮಿತವಾಗಿ ನಿರ್ವಹಣೆ ಮಾಡದೆ ಗಬ್ಬು ವಾಸನೆ ಬರುತ್ತಿದೆ. ಊಟ ಮತ್ತು ಬೆಳಗಿನ ಉಪಹಾರದಲ್ಲಿ ಕಳಪೆ ದಿನಸಿ ಪದಾರ್ಥಗಳನ್ನು ಬಳಕೆ ಮಾಡಲಾಗುತ್ತಿದೆ. ಕುಡಿಯಲು ಶುದ್ಧ ನೀರು ಸಹ ಸಿಗುತ್ತಿಲ್ಲ.
ಈ ವಿದ್ಯಾರ್ಥಿ ನಿಲಯದಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುವ ದೊಡ್ಡ ಹಾಲ್ನಲ್ಲಿ ಕೇವಲ ಒಂದೇ ಒಂದು ವಿದ್ಯುತ್ ಬಲ್ಬ್ ಇದೆ. ಇದರ ಬೆಳಕು ಸಾಕಾಗದೇ ವಿದ್ಯಾರ್ಥಿಗಳು ಓದಲು ಪರದಾಡುವಂತಾಗಿದೆ. ಈ ಬೆಳಕಿನಲ್ಲಿ ಪರೀಕ್ಷೆ ಸಮಯದಲ್ಲಿ ಓದುವುದು ಕಷ್ಟವಾಗುತ್ತದೆ.
ರಗ್ಗು ಕಿತ್ತು ಹೋಗಿದ್ದರೂ ಅದರಲ್ಲೇ ದಿನ ನಿತ್ಯ ವಿದ್ಯಾರ್ಥಿಗಳು ಹೆಣಗಾಡುತ್ತಿದ್ದಾರೆ. ಇವುಗಳನ್ನು ಬದಲಾಯಿಸಿ ಎಂದು ಕೇಳಿಕೊಂಡರೂ ಪ್ರಯೋಜನವಿಲ್ಲವೆಂದು ವಿದ್ಯಾರ್ಥಿಗಳು ಸಮಸ್ಯೆಗಳ ಸರಮಾಲೆಯನ್ನೇ ತೋಡಿಕೊಂಡರು.
‘ಈ ಹಾಸ್ಟೆಲ್ನ ಅವ್ಯವಸ್ಥೆ ಸರಿಪಡಿಸಬೇಕೆಂದು ಸಾಕಷ್ಟು ಬಾರಿ ಸಮಾಜ ಕಲ್ಯಾಣ ಇಲಾಖಾ ಸಹಾಯಕ ನಿರ್ದೇಶಕರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಉದಾಸೀನ ತೋರುತ್ತಿದ್ದಾರೆ. ಮಕ್ಕಳಿಗೆ ಹಾಸ್ಟೆಲ್ನಲ್ಲಿ ಕ್ರೀಡಾ ಸಾಮಗ್ರಿಗಳು ಇದ್ದರೂ ಕೊಡುತ್ತಿಲ್ಲ’ ಎಂದು ಪೋಷಕರು ದೂರಿದರು.
ಸುಮಾರು ವರ್ಷಗಳಿಂದ ಹಳೆಕೋರ್ಟ್ ಕಟ್ಟಡದಲ್ಲೇ ಈ ಹಾಸ್ಟೆಲ್ ಬಾಡಿಗೆಯಲ್ಲಿ ನಡೆಯುತ್ತಿದೆ. ಜತೆಗೆ ಕೊಠಡಿ, ಚಾವಣಿ ಮತ್ತು ಕಿಟಕಿಗಳು ಹಳೆಯದಾಗಿದ್ದು ಹೊಸ ಕಟ್ಟಡದ ಅಗತ್ಯತೆ ಇದೆ.
ಈ ವಿದ್ಯಾರ್ಥಿನಿಲಯದಲ್ಲಿ ಖಾಯಂ ವಾರ್ಡನ್ ಇಲ್ಲ. ಆದರೆ ಸಮಾಜ ಕಲ್ಯಾಣ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರೊಬ್ಬರನ್ನೇ ವಾರ್ಡನ್ ಆಗಿ ನೇಮಕ ಮಾಡಲಾಗಿದೆ. ಕಳೆದ ಏಳೆಂಟು ವರ್ಷಗಳಿಂದ ಕೆಲವು ಸಿಬ್ಬಂದಿಗಳು ಇಲ್ಲೇ ಬೀಡು ಬಿಟ್ಟಿದ್ದು ಯಾವ ಅಧಿಕಾರಿಗಳ ಮಾತೂ ಕೇಳುತ್ತಿಲ್ಲ. ಏಳೆಂಟು ವರ್ಷಗಳಿಂದ ಇಲ್ಲೇ ಉಳಿದಿರುವ ಸಿಬ್ಬಂದಿಯನ್ನು ಬೇರೆಡೆಗೆ ಬದಲಾಯಿಸಬೇಕು. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖಾ ಮಂತ್ರಿ, ಜಿಲ್ಲಾಧಿಕಾರಿಗೂ ದೂರು ಸಲ್ಲಿಸಿದ್ದೇನೆ ಎಂದು ದಸಂಸ ಸಂಚಾಲಕ ಡಾ.ಚಂದ್ರಯ್ಯ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.