ಶಿರಾ: ಸಮರ್ಪಕ ಕಸ ವಿಲೇವಾರಿ ಮಾಡದ ಸಿದ್ಧ ಉಡುಪುಗಳ (ಬಟ್ಟೆ) ಮಾರಾಟ ಮಳಿಗೆ ಮುಂದೆ ನಗರಸಭೆ ಸಿಬ್ಬಂದಿ ಶುಕ್ರವಾರ ಕಸ ಸುರಿದ ಪ್ರತಿಭಟನೆ ನಡೆಸಿದರು.
ಬಾಲಾಜಿ ನಗರ ಮುಖ್ಯ ರಸ್ತೆಯಲ್ಲಿರುವ ಬಟ್ಟೆ ಮಾರಾಟ ಅಂಗಡಿಯವರು ಕಸವನ್ನು ಸಮೀಪದ ಖಾಲಿ ನಿವೇಶನದಲ್ಲಿ ಸುರಿಯುತ್ತಿದ್ದರು. ಕಸ ಗಾಳಿಯಿಂದ ರಸ್ತೆಗೆ ಬರುತ್ತಿತ್ತು. ಚರಂಡಿಗೆ ಬಿದ್ದು ನೀರು ಹರಿಯದೆ ಚರಂಡಿ ಕಟ್ಟಿಕೊಂಡು ದುರ್ನಾತ ಬೀರುತ್ತಿದೆ. ಅಂಗಡಿಯವರ ಜೊತೆಗೆ ಸ್ಥಳೀಯರೂ ಕಸ ತಂದು ಇಲ್ಲಿ ಸುರಿಯುತ್ತಿದ್ದ ಕಾರಣ ನಿತ್ಯ ಕಸ ತೆರವುಗೊಳಿಸಿ ಸ್ವಚ್ಛಗೊಳಿಸಿದರೂ ಸ್ವಚ್ಛತೆ ಕಾಣದಂತಾಗಿತ್ತು.
ಅಂಗಡಿಯ ಕಸವನ್ನು ರಸ್ತೆ ಬದಿ ಸುರಿಯದೆ ಸಂಗ್ರಹಿಸಿಕೊಂಡು, ಕಸದ ಗಾಡಿಗೆ ಹಾಕುವಂತೆ ನಗರಸಭೆ ಸಿಬ್ಬಂದಿ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗದ ಕಾರಣ ಶುಕ್ರವಾರ ನಗರಸಭೆ ಸಿಬ್ಬಂದಿ ಕಸವನ್ನು ಅವರ ಅಂಗಡಿ ಬಾಗಿಲ ಬಳಿಯೇ ತೆಗೆದುಕೊಂಡು ಹೋಗಿ ಸುರಿದರು.
ಸಮರ್ಪಕವಾಗಿ ಕಸ ವಿಲೇವಾರಿ ಮಾಡದ ಎಲ್ಲರ ಮೇಲೆ ಇದೇ ರೀತಿ ಕ್ರಮ ತೆಗೆದುಕೊಂಡು ಅವರಿಗೆ ದಂಡ ವಿಧಿಸಿದರೆ ಮಾತ್ರ ಸ್ವಚ್ಛತೆ ಸಾಧ್ಯ ಎಂದು ಸಾರ್ವಜನಿಕರು ಹೇಳಿದರು.
ಶಿರಾದಲ್ಲಿ ಸಮರ್ಪಕವಾಗಿ ಕಸವನ್ನು ವಿಲೇವಾರಿ ಮಾಡದ ಅಂಗಡಿ ಮುಂದೆ ಕಸ ಸುರಿದಿರುವ ನಗರಸಭೆ ಸಿಬ್ಬಂದಿ.