ತುಮಕೂರು: ತಾಲ್ಲೂಕಿನ ನಾಗವಲ್ಲಿ ಕೃಷಿ ಸಹಕಾರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಜೆಡಿಎಸ್ ಬೆಂಬಲಿತ ಸದಸ್ಯರನ್ನು ಗ್ರಾಮಾಂತರ ಶಾಸಕ ಗೌರಿಶಂಕರ್ ಅಭಿನಂದಿಸಿದರು.
11 ಸದಸ್ಯ ಬಲದ ನಾಗವಲ್ಲಿ ಕೃಷಿ ಸಹಕಾರಕ್ಕೆ 8 ಮಂದಿ ಜೆಡಿಎಸ್ ಬೆಂಬಲಿತ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, 3 ಜನ ಇತರೆ ಸದಸ್ಯರು ಸಂಘಕ್ಕೆ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಗಂಗಣ್ಣ ಹಾಗೂ ಉಪಾಧ್ಯಕ್ಷರಾಗಿ ಮೂಡಲಗಿರಿಯಯ್ಯ ಆಯ್ಕೆಯಾಗಿದ್ದಾರೆ.
ಈ ವೇಳೆ ಶಾಸಕ ಗೌರಿಶಂಕರ್ ಮಾತನಾಡಿ, ‘ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷ ಸಂಘಟನೆಯ ದೃಷ್ಟಿಯಲ್ಲಿ ದೊರೆತಿರುವ ಈ ಗೆಲುವನ್ನು ನೂತನ ಸದಸ್ಯರು ರೈತರ ಕಲ್ಯಾಣಕ್ಕಾಗಿ ಬಳಸಬೇಕು. ನೇರವಾಗಿ ರೈತರೊಂದಿಗೆ ಸಂಪರ್ಕವಿರುವ ಕೃಷಿ ಸಹಕಾರಿ ಸಂಘವನ್ನು ಪರಿಣಾಮಕಾರಿಯಾಗಿ ಬಳಸಬೇಕು’ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ದೀಪಕ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹನುಮಂತರಾಜು, ಎಪಿಎಂಸಿ ಮಾಜಿ ಸದಸ್ಯ ಗೋಪಾಲಯ್ಯ, ಗ್ರಾಮ ಪಂಚಾಯಿತಿ ಸದಸ್ಯೆ ನಾಗರತ್ನಮ್ಮ, ನಾಗವಲ್ಲಿ ರಾಮಣ್ಣ, ವಿನಯ್, ಮಂಜು, ಶಶಿಧರ್, ವಿನಿ ಇದ್ದರು.