ತುಮಕೂರು: ಈ ಹಿಂದಿನಿಂದಲೂ ಸಾಹಿತ್ಯಾತ್ಮಕ ಕಲಾತ್ಮಕವಾಗಿ ಕನ್ನಡ ನಾಡು ಶ್ರೀಮಂತವಾದುದು.
ಪಂಪ, ರನ್ನ, ಕುಮಾರ ವ್ಯಾಸ ಹೀಗೆ ಹಲವು ಕವಿಗಳು, ಸಾಹಿತಿಗಳು ಭಾಷೆಯ ಬೆಳವಣಿಗೆಗೆ ಅಡಿಪಾಯ ಹಾಕಿದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು
ಮಾತೃಭಾಷೆಯನ್ನು ನಾವು ಹೆಚ್ಚು ಹೆಚ್ಚು ಬಳಸಬೇಕು. ಇದರಿಂದ ಕನ್ನಡವನ್ನು ಬೆಳೆಸಬಹುದು. ಮಾತೃಭಾಷೆಯಿಂದ ಮಕ್ಕಳಲ್ಲಿ ಆತ್ಮವಿಶ್ವಾಸ, ತಿಳಿವಳಿಕೆ ಹೆಚ್ಚುತ್ತದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಮಾತೃಭಾಷೆ ಕಲಿಸಲು ಒತ್ತು ನೀಡಬೇಕು ಎಂದರು.
ಕನ್ನಡ ನಾಡಿನ ಏಕೀಕರಣಕ್ಕೆ ಹಲವರು ದುಡಿದರು. ಅವರನ್ನು ಸ್ಮರಿಸಬೇಕು. ಜೈನಧರ್ಮ, ವೀರಶೈವ ಧರ್ಮ ಕನ್ನಡ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿ ನರಸಿಂಹರಾಜು, ಗುಬ್ಬಿ ವೀರಣ್ಣ ಹೀಗೆ ರಾಜ್ಯದ ರಂಗಕಲೆಯ ಬೇರು ತುಮಕೂರು ಜಿಲ್ಲೆಯಲ್ಲಿ ಇದೆ. ಇದು ನಮ್ಮ ಹೆಮ್ಮೆ.
ಶಿವಕುಮಾರ ಸ್ವಾಮೀಜಿ ಅವರು ತುಮಕೂರು ಜಿಲ್ಲೆಗೆ ತಮ್ಮದೇ ಆದ ಛಾಪು ನೀಡಿದ್ದಾರೆ. ಇಂದು ಅನ್ನ ಮತ್ತು ಅಕ್ಷರಕ್ಕೆ ನಾವು ಹಾಹಾಕಾರ ಪಡಬೇಕಾದ ಸ್ಥಿತಿ ಇಲ್ಲ ಎಂದು ಹೇಳಿದರು.
ಹೇಮಾವತಿ ಜತೆಗೆ ಜಿಲ್ಲೆಯಲ್ಲಿ ಎತ್ತಿನಹೊಳೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಜಿಲ್ಲೆಯಲ್ಲಿ ಜಾರಿ ಆಗಿದೆ. ಇನ್ನು ಎರಡು ವರ್ಷಗಳಲ್ಲಿ ಇಡೀ ಜಿಲ್ಲೆ ಹಸಿರು ನಾಡಾಗುತ್ತದೆ ಎಂದರು.