ತುಮಕೂರು: ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆಗೆ ನಗರದ ನಾಗರಿಕರು ಸ್ಪಂದಿಸಿದರು. ಭಾನುವಾರ ರಾತ್ರಿ 9ಕ್ಕೆ ಮನೆಗಳಲ್ಲಿ ವಿದ್ಯುತ್ ದೀಪಗಳನ್ನು ಆರಿಸಿ ಮೇಣದ ಬತ್ತಿ, ದೀಪ ಹಚ್ಚಿ ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟು ಪ್ರದರ್ಶಿಸಿದರು.
ಕೆಲವೆಡೆ ನಾಗರಿಕರು ಹಣತೆ, ಮೇಣದಬತ್ತಿ ಹಚ್ಚಿದರೆ, ಮತ್ತೆ ಕೆಲವೆಡೆ ಟಾರ್ಚ್, ಲಾಟೀನು, ಮೊಬೈಲ್ ಟಾರ್ಚ್ ಬೆಳಗಿಸಿದರು. ಅನೇಕರು ಮನೆಯ ಅಂಗಳ, ಬಾಲ್ಕನಿಯಲ್ಲಿ ದೀಪ ಬೆಳಗಿಸಿದರು. ಕೆಲವೆಡೆ ರಸ್ತೆಗಳಲ್ಲಿ ರಂಗೋಲಿ, ಭಾರತ ನಕಾಶೆ ಬಿಡಿಸಿ ಅದರಲ್ಲಿ ಹಣತೆ ಇಟ್ಟು ಗಮನ ಸೆಳೆದರು.
ಬಿಜೆಪಿ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು, ಸಾರ್ವಜನಿಕರು ಭಾರತ್ ಮಾತಾಕೀ ಜೈ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈ ಎಂದು ಘೋಷಣೆಗಳನ್ನು ಮೊಳಗಿಸಿದರು.
ನಗರದ ಅಲ್ಲಲ್ಲಿ ಹಣತೆ, ದೀಪ, ಮೇಣದಬತ್ತಿ ಹಚ್ಚಿದ್ದ ದೃಶ್ಯ ಕಂಡು ಬಂದರೆ, ಇನ್ನೂ ಕೆಲವು ಕಡೆಗಳಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ತಮಗೂ, ಪ್ರಧಾನಿ ಕರೆಗೂ ಸಂಬಂಧವೇ ಇಲ್ಲ ಎಂಬಂತೆ ಇದ್ದರು.
ಸಂಸದ ಜಿ.ಎಸ್.ಬಸವರಾಜು, ಶಾಸಕ ಜ್ಯೋತಿಗಣೇಶ್ ತಮ್ಮ ಮನೆಯಲ್ಲಿ ದೀಪ ಬೆಳಗಿಸಿದರು.