ಕೊರಟಗೆರೆ: ಎತ್ತಿನಹೊಳೆ ಯೋಜನೆ ಮತ್ತು ಅಕ್ರಮ ಕಲ್ಲು ಗಣಿಗಾರಿಕೆಗೆ ಕೋಳಾಲ- ತಂಗನಹಳ್ಳಿಯಲ್ಲಿ ನೂರಾ ರು ಎಕರೆ ಕೃಷಿ ಭೂಮಿಯನ್ನು ರೈತರ ಒಪ್ಪಿಗೆ ಇಲ್ಲದೇ ಸ್ವಾಧೀನ ಮಾಡಲಾಗಿದೆ ಎಂದು ಆರೋಪಿಸಿ ರೈತಸಂಘ ಮತ್ತು ಹಸಿರುಸೇನೆ ಸದಸ್ಯರು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ‘ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ತಿಮ್ಮಲಾಪುರ ಅಭಯಾರಣ್ಯದ ಸೂಕ್ಷ್ಮ ಪರಿಸರದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ರೈತರ ಒಪ್ಪಿಗೆ ಇಲ್ಲದೆ ಕೃಷಿ ಭೂಮಿ ಸ್ವಾಧೀನ ಪ್ರಕ್ರಿಯೆ ನಡೆಸಲಾಗಿದೆ’ ಎಂದರು.
ಎತ್ತಿನಹೊಳೆ ಯೋಜನೆಗೆ ರೈತರ ವಿರೋಧವಿಲ್ಲ. ಆದರೆ ಅಧಿಕಾರಿಗಳು ಗುತ್ತಿಗೆದಾರರ ಪರವಾಗಿ ಕೆಲಸ ಮಾಡದೇ, ಸರ್ಕಾರದ ನಿಮಯದಂತೆ ರೈತರಿಗೆ ಅನುಕೂಲ ಕಲ್ಪಿಸಬೇಕು. ತಂಗನಹಳ್ಳಿ ಬಳಿ ಗಣಿಗಾರಿಕೆ ಪ್ರಾರಂಭಿಸಲು ರೈತರ ಕೃಷಿ ಭೂಮಿಯನ್ನು ಬಲವಂತವಾಗಿ ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಭೂಮಿ ನೀಡುವುದಿಲ್ಲ ಎಂದರು.
ಕೋಳಾಲ ಜಿ.ಪಂ. ಸದಸ್ಯ ಜಿ.ಆರ್. ಶಿವರಾಮಯ್ಯ, ‘ಎತ್ತಿನಹೊಳೆಯೋಜನೆ ಮತ್ತು ಅಕ್ರಮ ಗಣಿಗಾರಿಕೆ ಭೂಸ್ವಾದೀನ ಪ್ರಕ್ರಿಯೆಯಿಂದ ಕೋಳಾಲದ ನೂರಾರು ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ₹ 8,000 ಕೋಟಿಗೆ ಪ್ರಾರಂಭವಾದ ಎತ್ತಿನಹೊಳೆ ಯೋಜನೆ ಅಂದಾಜು ವೆಚ್ಚ ಈಗ ₹ 24,000 ಕೋಟಿಗೆ ತಲುಪಿದೆ. ಕೋಳಾಲದ 22 ಗ್ರಾಮಗಳಿಗೆ ಸಮಸ್ಯೆ ಆಗಲಿದೆ’ ಎಂದರು.