ಶಿರಾ: ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ಬಗ್ಗೆ ವರದಿ ನೀಡುವಂತೆ ಮುಖ್ಯಮಂತ್ರಿ ಸೂಚಿಸಿರುವ ಹಿನ್ನೆಲೆಯಲ್ಲಿ ಬುಧವಾರ ನೀರಾವರಿ ಇಲಾಖೆ ಮುಖ್ಯ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ ಭೇಟಿ ಪರಿಶೀಲಿಸಿದರು.
ಚುನಾವಣೆ ಪ್ರಚಾರಕ್ಕೆ ಮದಲೂರಿಗೆ ಬಂದಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆರು ತಿಂಗಳಲ್ಲಿ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ಭರವಸೆ ನೀಡಿದ್ದರು.
ಮುಖ್ಯಮಂತ್ರಿ ಸೂಚನೆಯ ಮೇರೆಗೆ ನೀರಾವರಿ ಇಲಾಖೆ ಮುಖ್ಯ ಕಾರ್ಯದರ್ಶಿ ಜತೆ ನೀರಾವರಿ, ಹೇಮಾವತಿ, ಜಿಲ್ಲಾ ಪಂಚಾಯತ್, ಭದ್ರಾ ಮೇಲ್ದಂಡೆ ಯೋಜನೆಯ ಎಂಜಿನಿಯರ್ಗಳು ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ನೀರು ಹರಿಯುವ ನಾಲೆಯನ್ನು ಕೆಂತಾರಲಹಟ್ಟಿ ಬಳಿ ವೀಕ್ಷಿಸಿದರು.
ಮದಲೂರು ಕೆರೆ ಸೇರಿದಂತೆ ಈ ಯೋಜನೆ ವ್ಯಾಪ್ತಿಯ 11 ಕೆರೆಗಳು, ಯಲಿಯೂರು, ಶಿರಾ ಮತ್ತು ಕಳ್ಳಂಬೆಳ್ಳ ಕೆರೆಗಳನ್ನು ತುಂಬಿಸುವಂತೆ ಮನವಿ ಮಾಡಿದರು.
‘ಮದಲೂರು ಕೆರೆಗೆ ಮೊದಲು ನೀರು ನಿಗದಿ ಮಾಡಿ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೊಂದರೆಯಾಗುವುದು. ಜತೆಗೆ ಶಿರಾ ತಾಲ್ಲೂಕಿಗೆ ನೀರು ಹರಿಯುವ ಪಟ್ರಾವಟನಹಳ್ಳಿ ಬಳಿ ನಾಲೆ ವಿಸ್ತರಿಸುವಂತೆ ಮುಖ್ಯಮಂತ್ರಿಗೆ ವರದಿ ನೀಡಿ ಅವರ ಜತೆ ಮಾತನಾಡಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಅಧಿಕಾರಿಗಳಿಗೆ ಸಂಸದ ಎ.ನಾರಾಯಣಸ್ವಾಮಿ ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಕಾವೇರಿ ನಿಗಮದ ನೀರಾವರಿ ಸಭೆಯಲ್ಲಿ ಚರ್ಚಿಸಿ ನೀರು ನಿಗದಿ ಮಾಡಿಸಬೇಕು. ಇಲ್ಲದಿದ್ದರೆ ಯಾರು ಏನು ಮಾಡಲು ಸಾಧ್ಯ ಇಲ್ಲ ಎಂದು ಅಧಿಕಾರಿಗಳು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದಸಂಸದ ಎ.ನಾರಾಯಣಸ್ವಾಮಿ ‘ ನೀವು ಏನು ಯೋಚನೆ ಮಾಡಬೇಡಿ. ಮದಲೂರು ಕೆರೆಗೆ ನೀರು ಹರಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ನೀವು ವರದಿ ನೀಡಿದರೆ ಸಾಕು ಮುಂದಿನ ಕೆಲಸವನ್ನು ನಾನು ಮಾಡಿಸುತ್ತೇನೆ’ ಎಂದು ಹೇಳಿದರು.
ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ತಿಮ್ಮಣ್ಣ, ಎಸ್.ಆರ್. ಗೌಡ, ರಾಜೇಶ್ ಗೌಡ, ನರಸಿಂಹಮೂರ್ತಿ ಇದ್ದರು.