ಪಾವಗಡ: 2024ರ ಮೊದಲ ಹಬ್ಬ ಸಂಕ್ರಾಂತಿಯನ್ನು ಸೋಮವಾರ ತಾಲ್ಲೂಕಿನಾದ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.
ಸುಗ್ಗಿ ಹಬ್ಬದ ಪ್ರಯುಕ್ತ ಗ್ರಾಮೀಣ ಪ್ರದೇಶದಲ್ಲಿ ಬೆಳೆದ ಶೇಂಗಾ, ತೊಗರಿ, ಗೆಣಸು, ಅವರೆ, ಕಬ್ಬು ಇತ್ಯಾದಿಗಳನ್ನು ಸೂರ್ಯ ದೇವರ ಚಿತ್ರಪಟದ ಮುಂದೆ ಇರಿಸಿ ಪೂಜಿಸಲಾಯಿತು. ರಾಸುಗಳನ್ನು ಅಲಂಕರಿಸಿ ಅವುಗಳಿಗೆ ಅಕ್ಕಿ, ಬೆಲ್ಲ ತಿನ್ನಿಸಿ ಪೂಜೆ ಸಲ್ಲಿಸಲಾಯಿತು.
ಪಟ್ಟಣದ ಶನೈಶ್ಚರ ದೇಗುಲಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ನವಗ್ರಹ, ಶೀತಲಾ ದೇವಿಗೆ ನಡೆದ ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು.
ನವಗ್ರಹ, ತಿಲ ಹೋಮ, ತೈಲಾಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಗಿತ್ತು.
ಸಂಕಾಪುರ, ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ದೇಗುಲದಲ್ಲಿ ಸಂಕ್ರಾಂತಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ಪಟ್ಟಣ, ಗ್ರಾಮಗಳ ಶಾಲೆಗಳಲ್ಲಿ ಶನಿವಾರದಿಂದಲೂ ರಂಗೋಲಿ ಸ್ಪರ್ಧೆ ನಡೆಯಿತು.
ಪಾವಗಡ ತಾಲ್ಲೂಕು ವದನಕಲ್ಲು ವಿ ಎಲ್ ಮಂಜುನಾಥ್ ಅವರ ಮನೆಯಲ್ಲಿ ಸೋಮವಾರ ದವಸ ಧಾನ್ಯ ಮಡಿಕೆಗಳನ್ನಿಟ್ಟು ಸಂಪ್ರದಾಯದಂತೆ ಸಂಕ್ರಾಂತಿ ಆಚರಿಸಲಾಯಿತು.
ಹೊಸ ಬಟ್ಟೆ ತೊಟ್ಟ ಮಕ್ಕಳಿಗೆ ಪೋಷಕರು ಎಳ್ಳು ಬೀರಿ ಆಶೀರ್ವದಿಸಿದರು.