ತುಮಕೂರು: ಎಲ್ಲರಿಗೂ ಸೂರು ಯೋಜನೆಯಡಿ 2022ರ ಒಳಗೆ ವಸತಿ ರಹಿತರಿಗೆ ನಿವೇಶನ ನೀಡಬೇಕಾಗಿದೆ. ಈ ಕಾರಣದಿಂದ ಒಂದು ತಿಂಗಳ ಒಳಗೆ ಸರ್ಕಾರಿ ಜಮೀನು ಗುರುತಿಸಿ ಜಿಐಎಸ್ ಲೇಯರ್ ಮಾಡಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು ಎಂದು ಕಂದಾಯ ಇಲಾಖೆ ಅಧಿಕಾರಿಗಳು ಸಂಸದ ಜಿ.ಎಸ್.ಬಸವರಾಜ್ ಅವರಿಗೆ ಮಾಹಿತಿ ನೀಡಿದರು.
ನಗರದ ಸಾಯಿಬಾಬಾ ದೇಗುಲದ ಸಭಾಂಗಣದಲ್ಲಿ ನಡೆದ ಸಂಸದರ ಆದರ್ಶ ಗ್ರಾಮ ಯೋಜನೆ, ದಿಶಾ ಸಮಿತಿ ಪ್ರಗತಿ ಪರೀಶಿಲನಾ ಸಭೆಯಲ್ಲಿ ಮಾತನಾಡಿದರು.
ಅಧಿಕಾರಿಗಳು ಬಡವರಿಗೆ ಸೇವೆ ಮಾಡಲೇಬೇಕು ಎಂದು ಮನಸ್ಸು ಮಾಡಿದರೆ ನಿವೇಶನ ನೀಡುವುದು ಸಮಸ್ಯೆಯೇ ಅಲ್ಲ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮವಾರು ಸರ್ಕಾರಿ ಜಮೀನು ಗುರುತಿಸುವಂತೆ ತಿಳಿಸಿದರು.
ಗುಬ್ಬಿ ತಾಲ್ಲೂಕು ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯನ್ನು ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆ ಮಾಡಿಕೊಂಡಿದ್ದು, ಪಂಚಾಯಿತಿ ವ್ಯಾಪ್ತಿಯ 18 ಗ್ರಾಮಗಳಲ್ಲಿನ ಎಲ್ಲಾ ವಿಧವಾದ ‘ಸರ್ಕಾರಿ ಜಮೀನುಗಳ ಜಿಐಎಸ್ ಲೇಯರ್’ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ಉಪವಿಭಾಗಾಧಿಕಾರಿ ಅಜಯ್ ಮಾತನಾಡಿದರು. ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್, ತಹಶೀಲ್ದಾರರಾದ ಮೋಹನ್ ಕುಮಾರ್, ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.