ಪಾವಗಡ: ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಶುಶ್ರೂಷಕಿ ಹಾಗೂ ಕಿರಿಯ ಮಹಿಳಾ ಸಹಾಯಕಿಯರ ಸೇವೆ ಮುಂದುವರಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ನೌಕರರು ತಹಶೀಲ್ದಾರ್, ತಾಲ್ಲೂಕು ಆರೋಗ್ಯ ಅಧಿಕಾರಿಗೆ ಮನವಿ ಸಲ್ಲಿಸಿದರು.
ಒಂದು ವರ್ಷದಿಂದ ಹೊರಗುತ್ತಿಗೆ ಆಧಾರರದಲ್ಲಿ ಸುಮಾರು 40 ಮಂದಿ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಏಕಾಏಕಿ ಕೆಲಸಕ್ಕೆ ಬರದಂತೆ ತಾಲ್ಲೂಕು ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ. ಇದೇ ಕೆಲಸ ನೆಚ್ಚಿಕೊಂಡಿರುವವರಿಗೆ ದಿಕ್ಕು ತೋಚದಂತಾಗಿದೆ ಎಂದು ನೌಕರರು ಸಮಸ್ಯೆ ಹೇಳಿಕೊಂಡರು.
ರಾಜ್ಯದ ಇತರೆಡೆ ಹೊರಗುತ್ತಿಗೆ ನೌಕರರ ಸೇವೆ ಮುಂದುವರಿಸಲಾಗಿದೆ. ಆದರೆ, ತಾಲ್ಲೂಕಿನಲ್ಲಿ ಕೆಲವರನ್ನು ಮಾತ್ರ ಸೇವೆಯಲ್ಲಿ ಮುಂದುವರಿಯುವಂತೆ ತಿಳಿಸಿದ್ದಾರೆ. ಮುಂದಿನ ಆದೇಶ ಬಂದ ನಂತರ ಸೇವೆಗೆ ತೆಗೆದುಕೊಳ್ಳಲಾಗುವುದು. ಆದರೆ ಹಾಲಿ ಕರ್ತವ್ಯ ನಿರ್ವಹಿಸುವವರನ್ನೇ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವ ಭರವಸೆ ನೀಡಲು ಆಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈವರೆಗೆ ಸೇವೆ ಸಲ್ಲಿಸಿದವರ ಪಿ.ಎಫ್, ಇ– ಜಿಐಎಸ್ ಇತ್ಯಾದಿ ಮಾಹಿತಿಯನ್ನೂ ನೌಕರರಿಗೆ ನೀಡಿಲ್ಲ ಎಂದು ನೌಕರರು ಆರೋಪಿಸಿದರು.
ಹೊರಗುತ್ತಿಗೆಗೆ ಬದಲಾಗಿ ಗುತ್ತಿಗೆ ಆಧಾರದಲ್ಲಿ ಸೇವೆಗೆ ನಿಯೋಜನೆಗೊಳಿಸಬೇಕು. ನೌಕರರ ಪಿ.ಎಫ್, ಇಜಿಐಎಸ್ ಕಟಾವಣೆ ಮಾಹಿತಿ ನೀಡಬೇಕು. ಪ್ರತಿ ತಿಂಗಳು ವೇತನ ನೀಡಬೇಕು. ಈವರೆಗೆ ಕಾರ್ಯ ನಿರ್ವಹಿಸಿದವರ ಸೇವೆಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು. ಬೇಡಿಕೆ ಈಡೇರಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ತಹಶೀಲ್ದಾರ್ ಪಿ.ಎಸ್. ಕುಂಬಾರ, ತಾಲ್ಲೂಕು ವೈದ್ಯಾಧಿಕಾರಿ ರಾಮಾಂಜಿನೇಯ ಅವರಿಗೆ ಮನವಿ ಸಲ್ಲಿಸಿದರು.