ತುಮಕೂರು: ‘ಅನೇಕ ಹಿರಿಯ ಮುಖಂಡರ ಸಲಹೆಯ ಮೇರೆಗೆ ತುಮಕೂರು ಲೋಕಸಭೆಯ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಮುಂದಿನ 5 ವರ್ಷದಲ್ಲಿ ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿಗೂ ಸಹ ಕುಡಿಯುವ ನೀರಿನ ಶಾಶ್ವತ ಯೋಜನೆ ರೂಪಿಸುವ ಗುರಿ ಹೊಂದಿದ್ದೇನೆ’ ಎಂದು ಜೆಡಿಎಸ್ ವರಿಷ್ಠ ಹಾಗೂ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ತಿಳಿಸಿದರು.
ನಗರದ ಮೈತ್ರಿ ಸರ್ಕಾರದ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
‘ನಾನು ಗೆದ್ದರೆ ದೇಶಕ್ಕೆ ಮತ್ತು ತುಮಕೂರು ಜಿಲ್ಲೆಗೆ ಸಣ್ಣ ಕಾಣಿಕೆ ನೀಡಲು ಸಾಧ್ಯವಾಗಲಿದೆ. ಭಿನ್ನಾಭಿಪ್ರಾಯ ಮರೆತು ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನ ಮಾಡುತ್ತೇನೆ’ ಎಂದು ನುಡಿದರು.
‘ರಾಹುಲ್ ಗಾಂಧಿ ಅವರನ್ನು ಪ್ರಧಾನಿಯನ್ನಾಗಿಸಲು ಎಲ್ಲ ಪ್ರಾದೇಶಿಕ ಪಕ್ಷಗಳ ನಾಯಕರ ಒಪ್ಪಿಗೆ ಇದೆ. ಅದು ನಮ್ಮ ಧರ್ಮ. ಅಧಿಕಾರಕ್ಕೆ ಬಂದರೆ ಪ್ರತ್ಯೇಕ ಕೃಷಿ ಬಜೆಟ್ ನೀಡಿರುವ ಕಾಂಗ್ರೆಸ್ ಭರವಸೆ ನೀಡಿದೆ’ ಎಂದು ಹೇಳಿದರು.
‘ನಾನು ಪ್ರಧಾನಿಯಾಗಿದ್ದಾಗ 11 ತಿಂಗಳ ಕಾಲ ದೇಶದ ಜಿಡಿಪಿ, ಕೃಷಿ, ಹೈನುಗಾರಿಕೆ, ಪಶುಸಂಗೋಪನೆಯಿಂದ ಶೇ 9.9 ರಷ್ಟು ಆದಾಯ ಇತ್ತು. ನಂತರ ಆ ಮಟ್ಟದಲ್ಲಿ ಆದಾಯ ಬಂದಿಲ್ಲ’ ಎಂದರು.
ಮಾಜಿ ಶಾಸಕ ಡಾ.ರಫೀಕ್ ಅಹಮದ್, ಜೆಡಿಎಸ್ ಮುಖಂಡ ಗೋವಿಂದರಾಜು, ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ, ವಿಧಾನಪರಿಷತ್ತಿನ ಸದಸ್ಯ ಬಿ.ಎಂ.ಫಾರೂಕ್, ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ ಎಚ್.ವೆಂಕಟೇಶ್ ಇದ್ದರು.