ತುಮಕೂರು: ಜಿಲ್ಲೆಯಲ್ಲಿ ಪರಿಶಿಷ್ಟರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ನ್ಯಾಯ ಒದಗಿಸಬೇಕು. ಪೊಲೀಸರಿಂದ ರಕ್ಷಣೆ ಕೊಡಿಸುವುದರ ಜತೆಗೆ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪೊಲೀಸರು ರಾಜಕೀಯ ಪ್ರಭಾವದಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡದೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪರಿಶಿಷ್ಟರ ದೌರ್ಜನ್ಯ ತಡೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಮಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಮಧುಗಿರಿ ತಾಲ್ಲೂಕು ತಿಪ್ಪಾಪುರದಲ್ಲಿ ಪರಿಶಿಷ್ಟ ಜಾತಿಯ ಹನುಮಂತಪ್ಪ ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದ್ದನ್ನು ಸಹಿಸದೆ ದೌರ್ಜನ್ಯ ನಡೆಸಿದ್ದಾರೆ. ಆರೋಪಿಗಳು ಮಾತ್ರ ನ್ಯಾಯಾಲಯದಿಂದ ಜಾಮೀನು ಪಡೆದು ಆರಾಮವಾಗಿದ್ದಾರೆ ಎಂದರು.
ಸಮಿತಿ ಪ್ರಮುಖರಾದ ಗೋಪಾಲ ಕೃಷ್ಣ ಹರಳಹಳ್ಳಿ, ಎನ್.ರಾಜಣ್ಣ, ಅಜ್ಜಪ್ಪ ರಾಜು ವೆಂಕಟಪ್ಪ, ಸೈಯಜ್ ಮುಜೀಬ್, ಸುಬ್ರಹ್ಮಣ್ಯ ಇದ್ದರು.