ಗುಬ್ಬಿ: ಮುಜರಾಯಿ ಇಲಾಖೆಯ ‘ಸಿ’ ವರ್ಗದ ದೇವಸ್ಥಾನದ ಅರ್ಚಕರಿಗೆ ತಸ್ತಿಕ್ ಆದಾಯ ಬಿಟ್ಟರೆ ಬೇರೆ ಆದಾಯ ಇಲ್ಲದಿರುವುದರಿಂದ ಜೀವನ ನಡೆಸುವುದು ಕಷ್ಟಕರ ಎಂದು ಅರ್ಚಕ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶ್ರೀವತ್ಸ ಹೇಳಿದರು.
ಪಟ್ಟಣದ ಚನ್ನಬಸವೇಶ್ವರ ದೇವಸ್ಥಾನ ಆವರಣದಲ್ಲಿ ಅರ್ಚಕರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದರು.
ಕೊರೊನಾ, ಲಾಕ್ಡೌನ್ನಲ್ಲಿ ಸರ್ಕಾರವು ಅರ್ಚಕರನ್ನು ಸಂಪೂರ್ಣವಾಗಿ ಕಡೆಗಣಿಸಿತು. ಸಿ ವರ್ಗದ ದೇವಾಲಯಗಳಿಗೆ ಹಾಗೂ ಅರ್ಚಕರಿಗೆ ಸರ್ಕಾರ ವಿಶೇಷ ಅನುದಾನ ನೀಡಬೇಕಾಗಿಲ್ಲ. ‘ಎ’ ವರ್ಗದ ದೇವಾಲಯಗಳ ಆದಾಯವನ್ನು ‘ಸಿ’ ವರ್ಗದ ದೇವಾಲಯದ ಅರ್ಚಕರಿಗೆ ನೀಡಿದರೆ ಸಾಕು ಎಂದರು.
ಶಾಸಕ ಎಸ್ಆರ್ ಶ್ರೀನಿವಾಸ್ ಮಾತನಾಡಿ, ‘ಅರ್ಚಕರು ತೃಪ್ತರಾದರೆ ಇಡೀ ಸಮಾಜವೇ ಸಂತೃಪ್ತವಾಗಿರುತ್ತದೆ. ತಸ್ತಿಕ್ ಹಣ ವಿತರಣೆ ವಿಚಾರದಲ್ಲಿ ಕೆಲವು ಅಧಿಕಾರಿಗಳು ಅರ್ಚಕರಿಗೆ ವಂಚಿಸುತ್ತಿದ್ದಾರೆ. ಯಾವುದೇ ತಸ್ತಿಕ್ ಹಣ ಬಾಕಿ ಇದ್ದರೆ ತಕ್ಷಣ ಬಿಡುಗಡೆ ಮಾಡಿಸುತ್ತೇನೆ’ ಎಂದು ಹೇಳಿದರು.
ತೇವಡಿಹಳ್ಳಿಯ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ ಮಾತನಾಡಿ, ‘ಅರ್ಚಕರು ಬೇರೆ ಬೇರೆ ಜಾತಿಯವರಾದರೂ ಎಲ್ಲರೂ ದೇವರ ಪೂಜೆ ಮಾಡುವವರಾಗಿದ್ದಾರೆ. ಇಡೀ ಅರ್ಚಕ ಸಮುದಾಯ ಒಂದಾಗಬೇಕಾದ ಅಗತ್ತ ಇದೆ. ಎಲ್ಲರೂ ಸಂಕಲ್ಪ ಮಾಡಿದರೆ ನಾವು ಕರೋನ ಸಾಂಕ್ರಾಮಿಕ ರೋಗವನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಅರ್ಚಕ ಸಂಘದ ಅಧ್ಯಕ್ಷ ರಾಮ ತೀರ್ಥನ್, ತಹಶೀಲ್ದಾರ್ ತಿಪ್ಪೇಸ್ವಾಮಿ, ಎಪಿಎಂಸಿ ನಿರ್ದೇಶಕ ಲೋಕೇಶ್ ಹಾಗೂ ತಾಲ್ಲೂಕು ಅರ್ಚಕ ಸಂಘದ ಅಧ್ಯಕ್ಷ ರಂಗನಾಥ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.