ಗುಬ್ಬಿ: ‘ಸಂಸದ ಜಿ.ಎಸ್.ಬಸವರಾಜ್ ಅವರು ತಹಶೀಲ್ದಾರ್ ಸೇರಿದಂತೆ ಇತರೆ ಅಧಿಕಾರಿಗಳ ಬಳಿ ಲಂಚ ಪಡೆದು ತಾಲ್ಲೂಕಿಗೆ ಕರೆ ತಂದಿದ್ದಾರೆ. ಆದ್ದರಿಂದ ಅಧಿಕಾರಿಗಳು ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದೀರಿ. ಅದನ್ನು ದಾಖಲೆ ಸಮೇತ ಸಾಬೀತು ಮಾಡಿ’ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪಂಚಾಕ್ಷರಿ ಅವರು ಶಾಸಕ ಎಸ್.ಆರ್.ಶ್ರೀನಿವಾಸ್ ಅವರಿಗೆ ಸವಾಲು ಹಾಕಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭ್ರಷ್ಟಾಚಾರದ ಮೂಲ ನೀವೇ. ತಾಲ್ಲೂಕಿನಲ್ಲಿ 20 ವರ್ಷಗಳಿಂದ ಅಧಿಕಾರಿಗಳನ್ನು ಕರೆ ತರಲು ಎಷ್ಟು ಲಂಚ ತಗೆದುಕೊಂಡಿದ್ದೀರಿ ಎಂದು ನಿಮಗೆ ಗೊತ್ತಿಲ್ಲವೇ. ಮೊದಲು ನಿಮ್ಮ ಬಗ್ಗೆ ನೀವು ಆತ್ಮ ವಿಮರ್ಶೆ ಮಾಡಿಕೊಳ್ಳಿ. ಆನಂತರ ಇನ್ನೊಬ್ಬರ ಬಗ್ಗೆ ಮಾತನಾಡಿ’ ಎಂದು ಕಿಡಿಕಾರಿದರು.
ಮುಖಂಡ ದಿಲೀಪ್ ಕುಮಾರ್ ಮಾತನಾಡಿ, ‘ಇಡೀ ತಾಲ್ಲೂಕು ಕಚೇರಿ ಭ್ರಷ್ಟಾಚಾರದ ಕೂಪವಾಗಿದೆ. ಒಬ್ಬ ತಳಮಟ್ಟದ ಅಧಿಕಾರಿಯನ್ನು ರೈತರು ಸಣ್ಣ ಕೆಲಸಕ್ಕಾಗಿ ಸಾವಿರಾರು ರೂಪಾಯಿ ಲಂಚ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮೊದಲು ಅದನ್ನು ತಡೆಯಿರಿ. ಅಧಿಕಾರಿಗಳು ತಪ್ಪು ಮಾಡಿದರೆ ಪ್ರಶ್ನಿಸಿ ಕ್ರಮ ತಗೆದುಕೊಳ್ಳಲು ನಿಮಗೆ ಹಕ್ಕಿದೆ. ನಿಮ್ಮಲ್ಲಿ ಶಕ್ತಿ ಇದ್ದರೆ ಲಂಚ ಪಡೆಯುವವರ ವಿರುದ್ಧ ಕ್ರಮ ತಗೆದುಕೊಳ್ಳಿ’ ಎಂದು ಆಗ್ರಹಿಸಿದರು.
‘ಹೌದು, ನೀವು ಯಾವತ್ತೂ ಯಾರಿಂದಲೂ ಬಿಡಿಗಸೂ ಮುಟ್ಟಿಲ್ಲ. ಆದರೆ, ಹಿಂಬಾಗಿಲಿನಿಂದ ನಿಮ್ಮ ಪತ್ನಿಯನ್ನು ಬಿಟ್ಟು ಲಂಚ ಪಡೆದುಕೊಳ್ಳುತ್ತೀರಿ. ಹಾಗಾಗಿ ನೀವು ಹೇಗೆ ಲಂಚ ಪಡೆದಂತಾಗುತ್ತದೆ ಬಿಡಿ’ ಎಂದು ವ್ಯಂಗ್ಯ ಮಾಡಿದರು.
ಬಿಜೆಪಿಯ ಸಂಸದರಿಗೆ ಲಂಚ ನೀಡಿ ಗುಬ್ಬಿಗೆ ಬಂದಿದ್ದೇನೆ ಎಂದು ಹೇಳಿಕೊಂಡು ಗುಬ್ಬಿ ತಹಶಿಲ್ದಾರರು ಹಣ ವಸೂಲಿಗೆ ಇಳಿದಿರುವ ದೂರುಗಳು ಬಂದಿದ್ದು, ಭ್ರಷ್ಟಾಚಾರ ರಹಿತವಾಗಿದ್ದ ಗುಬ್ಬಿ ತಾಲೂಕು ಕಚೇರಿಯನ್ನು ಭ್ರಷ್ಟಾಚಾರದ ಕೂಪವನ್ನಾಗಿ ಪರಿವರ್ತಿಸಿದ್ದಾರೆ. ಮುಖ್ಯಮಂತ್ರಿಗಳಾದ @BSYBJP ಅವರು ಈ ಕುರಿತು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. pic.twitter.com/0ARse1oecd