ಪಾವಗಡ: ಕೋವಿಡ್– 19 ಆರ್ಥಿಕ ಸಂಕಷ್ಟದಿಂದ ನಲುಗಿರುವ ತಾಲ್ಲೂಕಿನ ರೈತರಿಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಬಡ್ಡಿ ಮನ್ನಾ, ಒಟಿಎಸ್ ಸೌಕರ್ಯ ಕೊಡಬೇಕು ಎಂದು ಆಗ್ರಹಿಸಿ ಹಸಿರು ಸೇನೆ ಪದಾಧಿಕಾರಿಗಳು ಗುರುವಾರ ಪಟ್ಟಣದ ಬ್ಯಾಂಕ್ ಮುಂಭಾಗ ಪ್ರತಿಭಟಿಸಿದರು.
ಎಸ್ಬಿಐ ಸೇರಿದಂತೆ ಇತರೆ ಬ್ಯಾಂಕ್ಗಳಲ್ಲಿ ಬೆಳೆ ಸಾಲ, ಸ್ತ್ರೀಶಕ್ತಿ ಸಾಲ ಸೇರಿದಂತೆ ಇತರೆ ಸಾಲಗಳಿಗೆ ಬಡ್ಡಿ ಮನ್ನಾ, ಒನ್ ಟೈಮ್ ಸೆಟಲ್ಮೆಂಟ್ ಸವಲತ್ತು ನೀಡಲಾಗಿದೆ. ಆದರೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ರೈತರಿಂದ ಹೆಚ್ಚಿನ ಬಡ್ಡಿದರ ವಸೂಲಿ ಮಾಡುವುದರ ಜೊತೆಗೆ, ಕೋವಿಡ್ 19 ಸಂಕಷ್ಟದಲ್ಲಿರುವ ರೈತರ ಮೇಲೆ ಶೀಘ್ರ ಸಾಲ ಮರು ಪಾವತಿ ಮಾಡುವಂತೆ ಒತ್ತಡ ಹಾಕಲಾಗುತ್ತಿದೆ. ಬೆಳೆ ಸಾಲಕ್ಕೆ ಶೇ 15.5 ರಷ್ಟು ಬಡ್ಡಿ ಹಾಕಲಾಗುತ್ತಿದೆ ಎಂದು ಪ್ರತಿಭಟನನಿರತರು ಆರೋಪಿಸಿದರು.
ಸಮರ್ಪಕ ಬೆಲೆ ಸಿಗದೆ ಕೊರೊನಾ ಸಮಸ್ಯೆಯಿಂದ ಆರ್ಥಿಕವಾಗಿ ಸಮಸ್ಯೆಯಲ್ಲಿರುವ ರೈತರಿಗೆ ಬ್ಯಾಂಕ್ಗಳು ಸಹಾಯ ಸಹಕಾರ ನೀಡಿ ಸಾಲದ ಹೊರೆಯಿಂದ ಹೊರಬರಲು ಮುಂದಾಗಬೇಕು. ಈಗಾಗಲೆ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಗಳು ನಡೆಯುತ್ತಿದ್ದು, ಬ್ಯಾಂಕ್ ಅಧಿಕಾರಿಗಳು ಒತ್ತಡ ಹೇರದೆ ರೈತರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಬ್ಯಾಂಕ್ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬೇಡಿಕೆ ಈಡೇರಿಸುವಂತೆ ವ್ಯವಸ್ಥಾಪಕ ದಯಾನಂದ್ ಅವರಿಗೆ ಮನವಿ ಸಲ್ಲಿಸಿದರು.
ಹಸಿರು ಸೇನೆ ಅಧ್ಯಕ್ಷ ಪೂಜಾರಪ್ಪ, ಪದಾಧಿಕಾರಿ ವಿಜಯಪ್ಪ, ಸದಾಶಿವಪ್ಪ, ಮಹಲಿಂಗಪ್ಪ, ಹನುಮಂತರಾಯಪ್ಪ, ರಾಮಚಂದ್ರಪ್ಪ, ಈಶ್ವರಪ್ಪ, ಅಶ್ವಥಪ್ಪ, ಸಿದ್ದಪ್ಪ, ರಮೇಶ ಉಪಸ್ಥಿತರಿದ್ದರು.