ತುಮಕೂರು: ತುಮಕೂರು ನಗರ ಸೇರಿದಂತೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಹದವಾದ ಮಳೆ ಮುಂದುವರಿದಿದೆ. ಕಳೆದ ಎರಡುಮೂರು ದಿನಗಳಿಂದಲೂ ಅಲ್ಲಲ್ಲಿ ಮಳೆ ಸುರಿಯುತ್ತಿದೆ. ಮೂರು ದಿನಗಳ ಹಿಂದೆ ಮಧುಗಿರಿ ತಾಲ್ಲೂಕಿನ ಬೇಡತ್ತೂರಿನಲ್ಲಿ ಸುರಿದ ಮಳೆ ಇಡೀ ರಾಜ್ಯದಲ್ಲಿಯೇ ಅತಿ ಹೆಚ್ಚು ಎನಿಸಿತ್ತು.
ಬುಧವಾರ ರಾತ್ರಿಯೂ ತುಮಕೂರು ನಗರದಲ್ಲಿ ಉತ್ತಮ ಮಳೆ ಸುರಿಯಿತು. ರಾತ್ರಿ ಆರಂಭವಾದ ಮಳೆ ಬೆಳಗಿನ ಜಾವದವರೆಗೂ ಮುಂದುವರಿಯಿತು. ಮತ್ತೆ ಗುರುವಾರ ಮಧ್ಯಾಹ್ನ ಮತ್ತು ಸಂಜೆಯೂ ಹದವಾದ ಮಳೆ ಬಿತ್ತು.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು, ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿ, ತುಮಕೂರು ತಾಲ್ಲೂಕು ಕೋರ, ಗುಬ್ಬಿ ತಾಲ್ಲೂಕು ಹಾಗಲವಾಡಿ ಭಾಗದಲ್ಲಿ ಉತ್ತಮ ಮಳೆ ಸುರಿಯಿತು. ಉಳಿದ ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ.
ನಗರದಲ್ಲಿ ಸ್ಮಾರ್ಟ್ಸಿಟಿ ಕಾಮಗಾರಿಗಳು ನಡೆಯುತ್ತಿವೆ. ಹಲವು ಕಡೆಗಳಲ್ಲಿ ರಸ್ತೆಯನ್ನು ಅಗೆಯಲಾಗಿದೆ. ಮಳೆ ಸುರಿದ ಕಾರಣ ಈ ರಸ್ತೆಗಳು ಕೆಸರು ಗದ್ದೆಯಂತೆ ಆದವು. ಬೈಕ್ ಸವಾರರು ಕಷ್ಟಪಟ್ಟು ಸಾಗಿದರು. ಪಾದಚಾರಿಗಳು ಎಲ್ಲಿ ಕೆಸರು ಸಿಡಿಯುತ್ತದೆ ಎನ್ನುವ ಭಯದಲ್ಲಿ ಸಂಚರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.