ತುಮಕೂರು: ಲಾಕ್ಡೌನ್ನಿಂದ ಬಡ ಜನರಿಗೆ ತೊಂದರೆ ಆಗಬಾರದೆಂದುಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಎರಡು ತಿಂಗಳ ಪಡಿತರವನ್ನು ಒಂದೇ ಬಾರಿಗೆ ವಿತರಿಸುತ್ತಿದೆ. ಆ ಪಡಿತರವನ್ನು ಅಂಗಡಿಯಿಂದ ಪಡೆದ ಜನರು, ಮನೆಯವರೆಗೂ ಸಾಗಿಸಲು ಶ್ರಮ ಪಡಬೇಕಾಯಿತು.
ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಮೂರ್ನಾಲ್ಕು ಸಣ್ಣ ಹಳ್ಳಿಗಳಿಗೆ ಒಂದು ಪಡಿತರ ಅಂಗಡಿ ಇದೆ. ಒಂದು ಊರಿನ ಜನರು ಮತ್ತೊಂದು ಊರಿಗೆ ಹೋಗಿ ಪಡಿತರ ಪಡೆಯಬೇಕಾದ ಸ್ಥಿತಿ ಇದೆ. ವಾಹನ ವ್ಯವಸ್ಥೆ ಇಲ್ಲದ ಕಾರಣ ಪಡಿತರವನ್ನು ಮನೆಗೆ ಸಾಗಿಸಲು ಬಹುತೇಕರು ಹರಸಾಹಸ ಪಡಬೇಕಾಯಿತು. ಕೆಲವರು ಬೈಕ್, ಮೊಪೆಡ್ಗಳ ಮೊರೆ ಹೋದರು.
ಪಡಿತರ ಪಡೆಯಲು ಬಹುತೇಕ ಅಂಗಡಿಗಳ ಮುಂದೆ ಜನರು ಗುಂಪುಗೂಡಿದ್ದರು. ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ. ಅಂಗಡಿ ಮುಂದೆ ಹಾಕಿದ್ದ ಚೌಕ, ವೃತ್ತದ ಗುರುತುಗಳಲ್ಲಿ ಚೀಲಗಳನ್ನು ಇಟ್ಟು, ಗುಂಪಾಗಿ ಕೂತು ಸರದಿಗಾಗಿ ಕಾಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.