ಕೊಪ್ಪಳ: ಗದಗ ಜಿಲ್ಲೆಯ ಕೆಲವು ಹಳ್ಳಿಗಳನ್ನು ಹೈದರಾಬಾದ್ ಕರ್ನಾಟಕದ ಪ್ರದೇಶಕ್ಕೆ ಸೇರಿಸಿ ಸಂವಿಧಾನದ 371ನೇ(ಜೆ) ಮೀಸಲಾತಿ ಸೌಲಭ್ಯ ವಿಸ್ತರಿಸುತ್ತಿರುವುದನ್ನು ವಿರೋಧಿಸಿ ಬುಧವಾರ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಸದಸ್ಯರು ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
'ಹೈದರಾಬಾದ್ - ಕರ್ನಾಟಕಕ್ಕೆ ಸಂವಿಧಾನದ 371(ಜೆ) ತಿದ್ದುಪಡಿಯಾಗಿ ಐದು ವರ್ಷ ಕಳೆದಿದೆ. ಈವರೆಗೆ ರಾಜ್ಯ ಸರ್ಕಾರಕ್ಕೆ ಅದನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಾಧ್ಯವಾಗಿಲ್ಲ. ಇದಕ್ಕೆ ಆಡಳಿತಶಾಹಿ ವ್ಯವಸ್ಥೆಯ ನಿರ್ಲಿಪ್ತತೆ ಕಾರಣ ಎನ್ನಲಾಗಿತ್ತು.
ಆದರೆ ಮಾರ್ಚ್ 4ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಹೈದರಾಬಾದ್ ಕರ್ನಾಟಕಕ್ಕೆ ಕೊಡಲಿಪೆಟ್ಟು ನೀಡುವ ನಿರ್ಣಯ ತೆಗೆದುಕೊಂಡು ಈ ಭಾಗದವರ ಅಸ್ತಿತ್ವಕ್ಕೆ ಧಕ್ಕೆ ತಂದಿದೆ' ಎಂದು ಪ್ರತಿಭಟನಾಕಾರರು ದೂರಿದರು.
ಸಮಿತಿಯ ಯುವ ಘಟಕದ ಜಿಲ್ಲಾಧ್ಯಕ್ಷ ರಮೇಶ ತುಪ್ಪದ, ಜಿಲ್ಲಾ ಸಂಚಾಲಕರಾದ ಹುಲಗಪ್ಪ ಕಟ್ಟಿಮನಿ, ಶಿವಕುಮಾರ ಕುಕನೂರು, ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ, ಶಿವಾನಂದ ಹೊದ್ಲೂರು, ಮಂಜುನಾಥ ಅಂಗಡಿ ಇದ್ದರು.