ತುಮಕೂರು: ನಿಗದಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ (ಕೆಆರ್ಇಡಿಎಲ್) ಗ್ರೇಡ್–1 ತಹಶೀಲ್ದಾರ್ (ಈಗ ನಿವೃತ್ತ) ವಿ. ವೆಂಕಟೇಶ್ಗೆ ನಾಲ್ಕು ವರ್ಷ ಶಿಕ್ಷೆ, ₹1.50 ಕೋಟಿ ದಂಡ ವಿಧಿಸಿ ನಗರದ ಏಳನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಕೆಆರ್ಇಡಿಎಲ್ ಆಡಳಿತಾಧಿಕಾರಿಯಾಗಿದ್ದ ಸಮಯದಲ್ಲಿ ಬೆಂಗಳೂರಿನ ಕಚೇರಿ, ಮನೆ, ತುಮಕೂರು ಜಿಲ್ಲೆಯ ವಿವಿಧೆಡೆ ಎಸಿಬಿ ಅಧಿಕಾರಿಗಳು ದಾಳಿಮಾಡಿದ್ದರು. ಆ ಸಮಯದಲ್ಲಿ ನಿಗದಿಗಿಂತ ಹೆಚ್ಚಿನ ಆದಾಯ ಹೊಂದಿರುವುದು ಪತ್ತೆಯಾಗಿತ್ತು. ತುಮಕೂರು ಎಸಿಬಿಯಲ್ಲಿ ಪ್ರಕರಣ ದಾಖಲಾಗಿತ್ತು.
ವೆಂಕಟೇಶ್ ಹಾಗೂ ಪತ್ನಿ, ಮಕ್ಕಳ ಹೆಸರಿನಲ್ಲಿ ₹2.34 ಕೋಟಿ ಆಸ್ತಿ ಇರುವುದು ಪತ್ತೆಯಾಗಿತ್ತು. ಆದಾಯಕ್ಕಿಂತ ಹೆಚ್ಚುವರಿಯಾಗಿ ₹1.42 ಕೋಟಿ ಆಸ್ತಿ ಗಳಿಸಿರುವುದು ತನಿಖೆ ಸಮಯದಲ್ಲಿ ಬೆಳಕಿಗೆ ಬಂದಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶ ಟಿ.ಪಿ. ರಾಮಲಿಂಗೇಗೌಡ ಅವರು ಅಪರಾಧಿಗೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಆರ್.ಪಿ. ಪ್ರಕಾಶ್ ವಾದ ಮಂಡಿಸಿದರು.
ಕುಣಿಗಲ್ ತಾಲ್ಲೂಕಿನ ಅಮೃತೂರು ಹೋಬಳಿಯ ಕೊಡವತ್ತಿ ಗ್ರಾಮದ ವೆಂಕಟೇಶ್ ಅವರು, ಈಗ ಬೆಂಗಳೂರಿನ ನಾಗರಬಾವಿಯಲ್ಲಿ ನೆಲೆಸಿದ್ದಾರೆ.