ತಿಪಟೂರು: ತಿಪಟೂರಿನ ಸತ್ಯಗಣಪತಿ 91ನೇ ವರ್ಷದ ಪ್ರತಿಷ್ಠಾಪನಾ ಮಹೋತ್ಸವ ಆಸ್ಥಾನ ಮಂಟಪದಲ್ಲಿ ನೆರವೇರಲಿದೆ.
ತಾಲ್ಲೂಕಿನ ಗಣಪತಿ ಪ್ರತಿಷ್ಠಾಪನಾ ಮಹೋತ್ಸವ ಬೆಂಗಳೂರಿನ ಕರಗ, ಮೈಸೂರಿನ ದಸರಾದಷ್ಟೇ ವಿಶೇಷವಾಗಿದೆ. ಆದರೆ, ಈ ಬಾರಿ ಕೊರೊನಾ ಸಂಕಷ್ಟದಿಂದ ಸದ್ದು ಗದ್ದಲವಿಲ್ಲದೆ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯುತ್ತಿದೆ.
ಪ್ರಾರಂಭದ ಪ್ರೇರಣೆ: 1929-30ರ ಸಮಯ, ದೇಶದ ಎಲ್ಲೆಡೆ ಸ್ವಾತಂತ್ರ್ಯದ ಕಿಡಿ ಸಿಡಿಯತೊಡಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳ ಆಚರಣೆ ಮುಖಾಂತರ ಜನರನ್ನು ಒಗ್ಗೂಡಿಸುವ ಯತ್ನಕ್ಕೆ ಸ್ವಾತಂತ್ರ್ಯ ಪ್ರೇಮಿಗಳು ಮುಂದಾದರು. ಅದರಲ್ಲಿ ಬಾಲಗಂಗಾಧರನಾಥ ತಿಲಕರು ಗಣಪತಿ ಉತ್ಸವದ ಆಚರಣೆಗೆ ಹೆಚ್ಚಿನ ಪ್ರಶಸ್ತ್ಯ ನೀಡಿದರು.
ಇದೇ ಸಮಯದಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದ ಸ್ವಾತಂತ್ರ್ಯ ಪ್ರೇಮಿ ತಿಮ್ಮಪ್ಪಯ್ಯ ಎಂಬುವರು ತಿಪಟೂರಿಗೆ ಬಂದರು. ತಿಪಟೂರಿನ ಸಾಂಸ್ಕೃತಿ ಹಾಗೂ ಸ್ವಾತಂತ್ರ್ಯದ ದಿಟ್ಟ ಹೆಜ್ಜೆಗಳನ್ನು ಗಮನಿಸಿದ ತಿಮ್ಮಪ್ಪಯ್ಯ ಮುಂಬೈನಲ್ಲಿ ನಡೆಯುತ್ತಿದ್ದ ಗಣೇಶೋತ್ಸವ ಮಾದರಿಯಲ್ಲಿ ತಾಲ್ಲೂಕಿನಲ್ಲೂ ಕಾರ್ಯಕ್ರಮ ಆಯೋಜಿಸಲು ಆಲೋಚಿಸಿ, ಗಣಪತಿ ಪ್ರತಿಸ್ಠಾಪನೆಗೆ ಮುಂದಡಿ ಇಟ್ಟರು. ಆ ಉತ್ಸವ ಇಂದಿಗೂ ಮುಂದುವರಿದುಕೊಂಡು ಬಂದಿದೆ.
ಗಣೇಶೋತ್ಸವಕ್ಕಾಗಿ ಜಾತ್ಯತೀತ ಸಂಘದ ಸ್ಥಾಪನೆ: ಪ್ರಾರಂಭದಲ್ಲಿ ಎಲ್ಲ ಮುಖಂಡರು, ನಾಗರಿಕರು ಹಾಗೂ ಯುವಕರು ಸೇರಿ ಗುಂಪು- ಗುಂಪಾಗಿ ಮಾಡುತ್ತಿದ್ದ ಗಣೇಶೋತ್ಸವವನ್ನು ಎಲ್ಲ ವರ್ಗದ, ಜಾತಿಯ ಜನರನ್ನು ಒಳಗೊಂಡಂತಹ ಸಂಘವನ್ನು ರೂಪಿಸಿ ಆಚರಣೆ ಮಾಡಲು 1934ರಲ್ಲಿ ಮುಂದಾದರು.
ಸಂಘದ ಅಧ್ಯಕ್ಷರನ್ನಾಗಿ ಮೈಸೂರು ಶಿವನಂಜಪ್ಪ ಮತ್ತು ಕಾರ್ಯದರ್ಶಿಯಾಗಿ ದಾಸಪ್ಪ ಅವರು ಕಾರ್ಯರಂಭ ಮಾಡಿದರು. 1998ರಲ್ಲಿ ಸತ್ಯಗಣಪತಿ ಸೇವಾ ಸಂಘ ಟ್ರಸ್ಟ್ ಸ್ಥಾಪಿಸಲಾಯಿತು.
ಅನುಮತಿ ಪಡೆದು ಗಣೇಶ ಪ್ರತಿಷ್ಠಾಪಿಸಿ
ತಿಪಟೂರು: ಗಣೇಶ ಹಬ್ಬದ ಪ್ರಯುಕ್ತ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮೂರ್ತಿಗಳನ್ನು ಕೂರಿಸಲು ಅನುಮತಿ ಪಡೆದುಕೊಳ್ಳಬೇಕು ಎಂದು ತಹಶೀಲ್ದಾರ್ ಚಂದ್ರಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರ ಪ್ರದೇಶದಲ್ಲಿ ನಗರಸಭೆಯಿಂದ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸ್ಥಳೀಯ ಗ್ರಾಮ ಪಂಚಾಯತಿಯಿಂದ ಅನುಮತಿ ಪಡೆಯಬೇಕು. ಕೋವಿಡ್–19 ಸಂದರ್ಭದಲ್ಲಿ ಹೆಚ್ಚು ಜನ ಸೇರದಂತೆ ಸರಳವಾಗಿ ಹಬ್ಬ ಆಚರಿಸಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.