ತುಮಕೂರು: ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ನ ಪ್ರಾಯೋಗಿಕ ಯೋಜನೆಯಾದ ‘ಸ್ಮಾರ್ಟ್ ಲಾಂಜ್ @ ಅಮಾನಿಕೆರೆ’ ಯೋಜನೆಗೆ ಶೈಕ್ಷಣಿಕ ಕಾರ್ಯಕ್ರಮ ವಿಭಾಗದಲ್ಲಿ ಸ್ಮಾರ್ಟ್ ಸಿಟಿ ಇಂಡಿಯಾ-2019 ಮೊದಲ ಪ್ರಶಸ್ತಿ ಲಭಿಸಿದೆ.
ನವದೆಹಲಿಯಲ್ಲಿ ಮೇ 22 ರಿಂದ 24ರವರೆಗೆ ನಡೆದ 5ನೇ ಸ್ಮಾರ್ಟ್ ಸಿಟಿ ಎಕ್ಸ್ಪೋ 2019ರಲ್ಲಿ ಕರ್ನಾಟಕ ರಾಜ್ಯದಲ್ಲಿ ಆಯ್ಕೆಯಾಗಿರುವ 7 ಸ್ಮಾರ್ಟ್ ಸಿಟಿಗಳಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಈ ಪ್ರಶಸ್ತಿಯನ್ನು ಪಡೆದ ಏಕೈಕ ನಗರವಾಗಿದೆ.
ಮೇ 24ರಂದು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ನ ಅಧ್ಯಕ್ಷೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಟಿ.ರಂಗಸ್ವಾಮಿ ಹಾಗೂ ಮುಖ್ಯ ಎಂಜಿನಿಯರ್ ಡಾ. ಹೆಚ್.ಆರ್.ಶಾಂತ ರಾಜಣ್ಣ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಸಮಾರಂಭದಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಸ್.ಆರ್. ರಶ್ಮಿ, ಹಾಗೂ ಕಿರಿಯ ನಗರ ಯೋಜಕರಾದ ನೂಪುರ್ ನಂದಿನಿ ಇದ್ದರು.
ಸ್ಮಾರ್ಟ್ ಲಾಂಜ್ ಒಂದು ನವೀನ ಯೋಜನೆಯಾಗಿದ್ದು, ನಾಗರಿಕರ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳನ್ನು ಹೆಚ್ಚು ಉಪಯುಕ್ತ ಮಾಡುವ ಉದ್ದೇಶದಿಂದ ಸ್ಮಾರ್ಟ್ ಲಾಂಜ್ ರೂಪಿಸಲಾಗಿದೆ ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧ್ಯಕ್ಷೆ ಡಾ.ಶಾಲಿನಿ ರಜನೀಶ್ ತಿಳಿಸಿದ್ದಾರೆ.
ಸ್ಮಾರ್ಟ್ ಲಾಂಜ್ನ ಯೋಜನೆಯಲ್ಲಿ ಸಾರ್ವಜನಿಕರಿಗೆ ಒಂದೇ ಸೂರಿನಡಿ ಕೈಗೆಟುಕುವ ಸೌಲಭ್ಯಗಳಾದ ಇ-ಗ್ರಂಥಾಲಯ, ವಿದ್ಯಾರ್ಥಿಗಳಿಗೆ ಡಿಜಿಟಲ್ ಓದುವಿಕೆ, ಸಾರ್ವಜನಿಕರಿಗೆ ಡಿಜಿಟಲ್ ಸೇವೆಗಳು, ಕಿಯೋಸ್ಕ್, ಕೆಫೆ ಹಾಗೂ ಶೌಚಾಲಯಗಳ ವ್ಯವಸ್ಥೆ ಇರುತ್ತದೆ ಎಂದು ಹೇಳಿದ್ದಾರೆ.
ಈ ಯೋಜನೆಯಲ್ಲಿ ಎಟಿಎಂ ಹಾಗೂ ಹೆಲ್ತ್ ಎಟಿಎಂ ಸೌಲಭ್ಯಗಳನ್ನು ಸಹ ಅಳವಡಿಸಲು ಉದ್ದೇಶಿಸಲಾಗಿದೆ. ಎಲ್ಲಾ ಸೌಲಭ್ಯವನ್ನು ಒಳಗೊಂಡ ಸ್ಮಾರ್ಟ್ ಲಾಂಜ್ ಯೋಜನೆಯನ್ನು ಪ್ರಾಯೋಗಿಕವಾಗಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗವಿರುವ ಅಮಾನಿಕೆರೆ ಆವರಣದಲ್ಲಿ ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.