ತುಮಕೂರು: ಹೊಸ ಗಣಿತ ಪಠ್ಯಕ್ರಮವು ವಿದ್ಯಾರ್ಥಿಗಳ ಉತ್ತಮ ಜ್ಞಾನಾರ್ಜನೆಗೆ ಹಾಗೂ ಉದ್ಯೋಗ ಪಡೆಯಲು ಹೆಚ್ಚು ಅನುಕೂಲವಾಗಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ವಿಭಾಗದ ಡೀನ್ ಮಲ್ಲಿಕಾರ್ಜುನ್ ಬಿ.ಪಾಟೀಲ್ ಹೇಳಿದರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಗಣಿತಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಪ್ರೊ.ಬಿ.ವಿ.ಮಂಜುನಾಥ್, ಡಾ.ಸಿ.ನಂದೀಶ್ಕುಮಾರ್ ರಚಿಸಿರುವ ತುಮಕೂರು ವಿವಿ ಪದವಿಯ 5 ನೇ ಸೆಮ್ನ ಗಣಿತಶಾಸ್ತ್ರ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ.ಜಗದೀಶ್ ಮಾತನಾಡಿ, ‘ಪ್ರಸ್ತುತ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯಗಳು, ಕಾಲೇಜುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಜ್ಞಾನಾರ್ಜನೆ ಸ್ಥಾವರವಾಗಬಾರದು, ಅದು ಜಂಗಮತ್ವವನ್ನು ಪಡೆಯಬೇಕು’ ಎಂದು ತಿಳಿಸಿದರು.
ಗಣಿತ ಪ್ರಾಧ್ಯಾಪಕ ಪ್ರೊ.ಸುರೇಶ್ ಮಾತನಾಡಿ, ’ಮಂಜುನಾಥ್ ಅವರು ಪುಸ್ತಕವನ್ನು ಬರೆಯುವಾಗ ತುಂಬಾ ಶ್ರಮಪಟ್ಟಿದ್ದು ಅದರಲ್ಲಿರುವ ವಿಷಯವು ಸವಿಸ್ತಾರವಾಗಿ ವಿದ್ಯಾರ್ಥಿಗಳ ಜ್ಞಾನಮಟ್ಟಕ್ಕೆ ಅನುಕೂಲವಾಗುವ ರೀತಿ ಇದೆ’ ಎಂದು ಅಭಿಪ್ರಾಯಪಟ್ಟರು.
ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಗ್ರಂಥಪಾಲಕರು, ಹಾಗೂ ಇತರೆ ಕಾಲೇಜಿನ ಉಪನ್ಯಾಸಕರು ಇದ್ದರು.