ತುಮಕೂರು: ಕುಣಿಗಲ್ ತಾಲ್ಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮಕ್ಕೆ ಮಂಗಳವಾರ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಭೇಟಿ ನೀಡಿ ಸರ್ಕಾರಿ ಶಾಲೆ ಉಳಿವಿಗಾಗಿ ಸೇತುವೆ ನಿರ್ಮಿಸಿದ ಗ್ರಾಮಸ್ಥರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆ ಹಾಗೂ ಸೇತುವೆಯನ್ನು ಪರಿಶೀಲಿಸಿದರು. ಸೇತುವೆ ನಿರ್ಮಾಣ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು.
‘ಪ್ರಜಾವಾಣಿ’ಯ ಕರ್ನಾಟಕ ದರ್ಶನ ಪುರವಣಿಯಲ್ಲಿ ಮಂಗಳವಾರ ‘ಕಾಡಶೆಟ್ಟಿಹಳ್ಳಿಯ ಸಮುದಾಯದ ಶ್ರಮದಾನ, ಸೇತುವೆ ಬಂತು; ಶಾಲೆ ಉಳಿಯಿತು’ ಶೀರ್ಷಿಕೆಯ ವರದಿ ಪ್ರಕಟವಾಗಿತ್ತು.
ತೊರೆಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳು ಕಾಡಶೆಟ್ಟಿಹಳ್ಳಿ ಸರ್ಕಾರಿ ಶಾಲೆಗೆ ಬರಲು ಮಾರ್ಕೊನಹಳ್ಳಿ ಜಲಾಶಯದ ಕಡೆಯಿಂದ ಹರಿಯುವ ಒಂದು ತೊರೆ ಅಡ್ಡಿ ಆಗಿತ್ತು. ಈ ಕಾರಣದಿಂದ ಸುತ್ತಲಿನ ಹಳ್ಳಿಗಳ ಮಕ್ಕಳು ದೂರದ ಶಾಲೆಗಳಿಗೆ ತೆರಳುತ್ತಿದ್ದರು. ಇದರಿಂದ ಕಾಡಶೆಟ್ಟಿಹಳ್ಳಿ ಶಾಲೆ ದಾಖಲಾತಿ ಕುಸಿತದಿಂದ ಮುಚ್ಚುವ ಹಂತದಲ್ಲಿ ಇತ್ತು.
ಆಗ ಗ್ರಾಮಸ್ಥರೆಲ್ಲ ಸೇರಿ ‘ದೈತ್ಯ ಮಾರಮ್ಮ ಟ್ರಸ್ಟ್’ ರಚಿಸಿಕೊಂಡು ತೊರೆಗೆ ಸೇತುವೆ ನಿರ್ಮಿಸಿದರು. ಇದರಿಂದ ಸುತ್ತಲಿನ ಹಳ್ಳಿಗಳ ಮಕ್ಕಳು ಕಾಡಶೆಟ್ಟಿ ಹಳ್ಳಿ ಶಾಲೆಗೆ ದಾಖಲಾದರು. ಗ್ರಾಮಸ್ಥರ ಈ ಪ್ರಯತ್ನ ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು.
ಗ್ರಾಮಕ್ಕೆ ಭೇಟಿ ನೀಡಿದ ಸುರೇಶ್ ಕುಮಾರ್, ‘ಹಳ್ಳಿಯ ಜನರ ಕಾರ್ಯ, ಒಗ್ಗಟ್ಟು ನಿಜಕ್ಕೂ ಅದ್ಭುತ. ಊರಿನ ಜನರಿಗೆ ಅಭಿನಂದನೆ ಸಲ್ಲಿಸುವೆ’ ಎಂದರು.