ತುಮಕೂರು: ಕನ್ನಡವನ್ನು ಉಳಿಸಿ ಬೆಳೆಸುವುದಕ್ಕಾಗಿಯೇ ಯುವ ತಲೆಮಾರಿಗೆ ಯಕ್ಷಗಾನ ಕಲಿಸಿ ಎಂದು ಹಿರಿಯ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಸಲಹೆ ನೀಡಿದರು.
ಎಸ್.ಎಸ್.ಪುರಂನ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಯಕ್ಷದೀವಿಗೆ ಸಂಸ್ಥೆಯು ಶನಿವಾರ ಆಯೋಜಿಸಿದ್ದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡವನ್ನು ಸಮೃದ್ಧ ಭಾಷೆಯನ್ನಾಗಿಸುವುದರಲ್ಲಿ ಯಕ್ಷಗಾನದ ಕೊಡುಗೆ ಇದೆ. ಹೊಸ ತಲೆಮಾರು ಮೊಬೈಲ್ ಮಾಯೆಯಲ್ಲಿ ಮುಳುಗಿದೆ. ಅವರ ಹಿರಿಯರು ಧಾರಾವಾಹಿಗಳಲ್ಲಿ ಕಳೆದು ಹೋಗಿದ್ದಾರೆ ಎಂದರು.
ಯಕ್ಷಗಾನದಂತಹ ಕಲೆಗಳಲ್ಲಿ ಮಕ್ಕಳು ಆಸಕ್ತಿ ವಹಿಸುವಂತೆ ಮಾಡುವುದೇ ಇದಕ್ಕಿರುವ ಪರಿಹಾರ. ಯಕ್ಷಗಾನವನ್ನು ಅಭ್ಯಾಸ ಮಾಡುವುದರಿಂದ ಭಾಷೆ, ಭಾವ ಪರಿಷ್ಕರಣೆ ಆಗುತ್ತದೆ. ಸಂಸ್ಕಾರ ಬೆಳೆಯುತ್ತದೆ ಎಂದು ತಿಳಿಸಿದರು.
’ಅತಿಕಾಯ ಕಾಳಗ’ ಎಂಬ ಬೋಧಪ್ರದ ಯಕ್ಷಗಾನ ತಾಳಮದ್ದಳೆ ಪ್ರದರ್ಶಿಸಲಾಯಿತು.