ಶಿರಾ: ಉಪಚುನಾವಣೆ ಫಲಿತಾಂಶ ಮುಂದಿನ ರಾಜಕಾರಣದ ಮೇಲೆ ಮಹತ್ವದ ಪರಿಣಾಮ ಬೀರಲಿದ್ದು, ಇಲ್ಲಿ ಜಯಚಂದ್ರ ಅವರನ್ನು ಗೆಲ್ಲಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ತಾಲ್ಲೂಕಿನ ದ್ವಾರಾಳು ಗೇಟ್ನಲ್ಲಿ ಮಂಗಳವಾರ ರೋಡ್ ಷೊ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರ ಪರ ಮತಯಾಚನೆಮಾಡಿದರು.
ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಈ ಚುನಾವಣೆ ಮಹತ್ವದಾಗಿದೆ. ಜಯಚಂದ್ರ ಅವರ ಆಯ್ಕೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಕ್ತಿ ಹೆಚ್ಚಿಸುವುದರ ಜತೆಗೆ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಪ್ರಶ್ನಿಸಲು, ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಜಯಚಂದ್ರ ಅಯ್ಕೆ ಅತ್ಯವಶ್ಯಕ. ಎಲ್ಲ ಸಮುದಾಯದವರು ಎಚ್ಚರ ವಹಿಸಿ ಕಾಂಗ್ರೆಸ್ ಪರ ಮತ ನೀಡಬೇಕು ಎಂದರು.
ಜಯಚಂದ್ರ ಆಯ್ಕೆಯಾದರೆ ಕ್ಷೇತ್ರದಲ್ಲಿ ಕುಂಠಿತವಾಗಿರುವ ಅಭಿವೃದ್ಧಿ ಕಾಮಗಾರಿಗಳು ಚುರುಕು ಪಡೆಯಲಿವೆ ಎಂದರು.
ಬೋವಿ ಸಮುದಾಯದ ಸಭೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೋವಿ ಸಮುದಾಯದ ಸಭೆ ನಡೆಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು.
ಶಾಸಕ ಡಾ.ಯತೀಂದ್ರ ಹಾಗೂ ಮುಖಂಡ ಎಚ್.ಎಂ.ರೇವಣ್ಣ ದ್ವಾರನಕುಂಟೆ, ಬೇವಿನಹಳ್ಳಿ, ವೀರಗಾನಹಳ್ಳಿ, ಹೆಂದೊರೆ, ಕಾಮಗೊಂಡನಹಳ್ಳಿ, ಪಟ್ಟನಾಯಕನಹಳ್ಳಿ ಗ್ರಾಮಗಳಲ್ಲಿ ಕಾಂಗ್ರೆಸ್ ಪರ ಮತಯಾಚಿಸಿದರು.
ಶಾಸಕ ಡಾ.ಜಿ.ಪರಮೇಶ್ಚರ ಹಾಗೂ ಕೆ.ಎನ್.ರಾಜಣ್ಣ ಗೌಡಗೆರೆ ಹೋಬಳಿಯಲ್ಲಿ ವಿವಿಧ ಸಮುದಾಯಗಳ ಸಭೆಗಳನ್ನು ನಡೆಸಿ ಪ್ರಚಾರ ನಡೆಸಿದರು.
ಕಾಂಗ್ರೆಸ್ ಮುಖಂಡ ಕೆ.ಎಚ್.ಮುನಿಯಪ್ಪ ಹಾಗೂ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಆರ್.ರಾಜೇಂದ್ರ ಹುಲಿಕುಂಟೆ ಹೋಬಳಿಯಲ್ಲಿ ಪ್ರಚಾರ ನಡೆಸಿದರು.