ತುಮಕೂರು: ಅಕ್ಷರ ಕಲಿಯಲು ವರ್ಣ ಹಾಗೂ ಲಿಂಗದ ಪ್ರಾಮುಖ್ಯತೆ ಇದ್ದ ಕಾಲಘಟ್ಟದಲ್ಲಿಯೇ ದಮನಿತ ವರ್ಗದ ಮಹಿಳೆಯರಿಗೆ ಅಕ್ಷರ ಜ್ಞಾನ ಮೂಡಿಸಿದವರು ಸಾವಿತ್ರಿ ಬಾಯಿ ಫುಲೆ ಎಂದುಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಾಧರ್ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾವಿತ್ರಿ ಬಾಯಿ ಫುಲೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಸಮಾಜದ ವಿರುದ್ಧ ಹೋರಾಡಿದ ಮೊದಲಿಗರು. ಅವರ ಹೋರಾಟದ ಫಲವಾಗಿ ಇಂದು ಹೆಣ್ಣು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಹಲವು ಸಮುದಾಯಗಳ ವಿರೋಧದ ಮಧ್ಯೆ ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಿದರು ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್, ‘ಸ್ವಾತಂತ್ರ್ಯ ಪೂರ್ವದಲ್ಲಿಯೇ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಶ್ರಮಿಸಿ, ಶಾಲೆಯನ್ನು ತೆರೆದ ಅಕ್ಷರದವ್ವ. ಭಾರತದ ಮೊಟ್ಟ ಮೊದಲ ಶಿಕ್ಷಕಿ. ಸಮಾಜದ ವಿರೋಧದ ನಡುವೆ ಮಹಿಳೆಯರಿಗೆ ಶಿಕ್ಷಣದ ಹಕ್ಕು ಕೊಡಿಸಲು, ಮಹಿಳಾ ಸಬಲೀಕರಣಕ್ಕೆ ಫುಲೆ ಶ್ರಮಿಸಿದವರು ಎಂದು ಹೇಳಿದರು.
ಕಾಲೇಜು ಪ್ರಾಚಾರ್ಯ ಎಸ್.ರಾಜಕುಮಾರ್, ಉಪನ್ಯಾಸಕರಾದ ರಾಧಾಕೃಷ್ಣ, ಆರ್.ಬಿ.ಗಂಗಾಧರ, ದಸ್ತಗಿರಿಸಾಬ್, ಹರೀಶ್, ಶ್ರೀಧರ್, ಪಾಂಡುರಂಗರಾವ್, ಪುಷ್ಪಾವತಿ, ವೀಣಾ, ಕೆ.ನಾಗರಾಜು, ಮುಖಂಡ ಧನಿಯಾಕುಮಾರ್ ಇದ್ದರು.