ತುಮಕೂರು: ಚಿಕ್ಕನಾಯಕಹಳ್ಳಿಯ ಗಾಂಧಿನಗರಕ್ಕೆ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ನೀಡಿ ದಕ್ಕಲಿಗ ಸಮುದಾಯದ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ ಜಿಲ್ಲೆ ಮತ್ತು ರಾಜ್ಯದ ವಿವಿಧ ಭಾಗಗಳಿಂದಲೂ ದಕ್ಕಲಿಗ ಮಕ್ಕಳಿಗೆ ನೆರವು ನೀಡುವುದಾಗಿ ಕೆಲವರು ಭರವಸೆ ಸಹ ನೀಡಿದ್ದಾರೆ.
‘ದಕ್ಕಲಿಗರಿಗೆ ದಕ್ಕದ ಸೌಲಭ್ಯ’ ಎಂದು ಸೋಮವಾರ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು.
‘ತುಮಕೂರು ಲೋಕಾಯುಕ್ತ ಡಿವೈಎಸ್ಪಿ ಸಿ.ಆರ್.ರವೀಶ್ ಹಾಗೂ ಸಿದ್ಧಗಂಗಾ ಆಸ್ಪತ್ರೆ ಸಹಯೋಗದಲ್ಲಿ ಮಂಗಳವಾರ ಗಾಂಧಿನಗರದಲ್ಲಿ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಮೈಸೂರಿನ ಒಬ್ಬರು ಕರೆ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಯೂ ಭೇಟಿ ನೀಡಿದ್ದಾರೆ’ ಎಂದು ದಕ್ಕಲಿಗ ಸಮುದಾಯದ ಶಾಂತರಾಜು ತಿಳಿಸಿದರು.
‘ಡಿವೈಎಸ್ಪಿ ರವೀಶ್ ಈ ಹಿಂದೆ ಖುದ್ದು ಬಂದು ನಮ್ಮ ಮಕ್ಕಳಿಗೆ ಪಾಠ ಮಾಡಿದ್ದರು. ಆಹಾರ, ಬಟ್ಟೆ ಕೊಡಿಸಿದ್ದರು. ಈಗ ಸಂಘ ಸಂಸ್ಥೆಗಳ ನೆರವಿನಲ್ಲಿ ಮತ್ತಷ್ಟು ನೆರವು ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ನಮ್ಮ ಬಗ್ಗೆ ಗಮನ ಸೆಳೆದ ಪತ್ರಿಕೆಗೆ ಧನ್ಯವಾದಗಳು’ ಎಂದು ಹೇಳಿದರು.