ಕೋರ: ಸಮಯ ಸಿಕ್ಕರೆ ಸಾಕು ಫೇಸ್ಬುಕ್, ವಾಟ್ಸ್ಆ್ಯಪ್ಗಳಲ್ಲಿ ಮುಳುಗುವ ಯುವಸಮೂಹವೇ ಹೆಚ್ಚು. ಆದರೆ ಇಲ್ಲೊಂದುಯುವಕರ ಪಡೆ ಬಿಡುವಿನ ವೇಳೆಯನ್ನು ಸಸಿ ನೆಟ್ಟು ಪರಿಸರ ರಕ್ಷಿಸುವ ಕಾರ್ಯಕ್ಕೆ ಮೀಸಲಿಟ್ಟಿದೆ.
ಹೋಬಳಿಯ ಕೆಸ್ತೂರು ಗ್ರಾಮದ ನೇತಾಜಿ ಯುವ ಬ್ರಿಗೇಡ್ ತಂಡ ಸದ್ದಿಲ್ಲದೆ ಪರಿಸರ ರಕ್ಷಿಸುವ ಕಾರ್ಯಕ್ಕೆ ಮುಂದಾಗಿದೆ.
ಗ್ರಾಮದ ಆಸ್ಪತ್ರೆ ಆವರಣ, ಪಂಚಾಯಿತಿ ಆವರಣ, ಸರ್ಕಾರಿ ಶಾಲೆ, ಪಶು ಆಸ್ಪತ್ರೆ ಆವರಣದಲ್ಲಿ ಸಸಿ ನೆಟ್ಟು ಪೋಷಿಸುತ್ತಿದೆ. ಸಸಿ ನೆಟ್ಟ ಬಳಿಕ ಬ್ರಿಗೇಡ್ ಯುವಕರು ಸ್ವಂತ ಹಣ ವಿನಿಯೋಗಿಸಿ ಸಸಿಗಳಿಗೆ ನೀರುಣಿಸುವ ಜೊತೆಗೆ ಪ್ರತಿ ಗಿಡಕ್ಕೆ ಬೇಲಿ ಹಾಕಿ ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ.
ಕಳೆದ ವರ್ಷ ವಿಶ್ವ ಪರಿಸರ ದಿನಾಚರಣೆ ದಿನದಂದು ಆಯ್ದ ಸ್ಥಳಗಳಲ್ಲಿ 100 ಸಸಿ ನೆಟ್ಟಿದ್ದ ಯುವಕರು ಅಷ್ಟೂ ಗಿಡಗಳಿಗೆ ಪಾತಿಮಾಡಿ, ನೀರುಣಿಸಿ ಜೋಪಾನ ಮಾಡಿದ್ದಾರೆ. ಈ ಬಾರಿಯೂ ಗಿಡ ನೆಡುವ ಸಂಕಲ್ಪ ತೊಟ್ಟಿದ್ದಾರೆ.