ತುಮಕೂರು: ಪೊಲೀಸರಲ್ಲಿ ಆತ್ಮವಿಶ್ವಾಸ ಮೂಡಿಸುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಸಿಬ್ಬಂದಿಯ ಕುಟುಂಬವೊಂದಕ್ಕೆ ಶನಿವಾರ ವಾಟ್ಸ್ಆ್ಯಪ್ ವಿಡಿಯೊ ಕರೆ ಮಾಡಿ ಧೈರ್ಯ ಹೇಳಿದರು.
ನಗರದ ಶಿವಕುಮಾರ ಸ್ವಾಮೀಜಿ ವೃತ್ತಕ್ಕೆ ಬಂದ ಎಸ್ಪಿ, ಅಲ್ಲಿ ಕರ್ತವ್ಯನಿರತರಾಗಿದ್ದ, ಎನ್ಇಪಿಎಸ್ ಠಾಣೆ ಸಹಾಯ ಸಬ್ಇನ್ಸ್ಪೆಕ್ಟರ್ ಚಂದ್ರಕಲಾ ಅವರ ಪತಿಗೆ ಕರೆ ಮಾಡಿದರು.
‘ಚೆನ್ನಾಗಿದ್ದೀರಾ. ತುಮಕೂರಿನಲ್ಲಿ ಇದ್ದೀರಾ’ ಎಂದು ಅವರ ಯೋಗಕ್ಷೇಮ ವಿಚಾರಿಸಿದರು.
‘ನಿಮಗೋಸ್ಕರ ನಿಮ್ಮ ಮನೆಯವರು ಹೊರಗೆ ಕೆಲಸ ಮಾಡುತ್ತಿದ್ದಾರೆ. ನೀವು ಮನೆಯಲ್ಲಿರಿ. ಹೊರಗೆ ಬರಬೇಡಿ. ನಿಮ್ಮ ಎಲ್ಲರಿಗಾಗಿಯೇ ನಾವು ಹೊರಗೆ ಕೆಲಸ ಮಾಡುತ್ತಿದ್ದೇವೆ. ನಿಮ್ಮ ಮನೆಯವರೂ ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲ ಪೊಲೀಸ್ ಕುಟುಂಬಕ್ಕೆ ಸೇರಿದವರು’.
‘ಸಿಬ್ಬಂದಿ ಮನೆಗೆ ಹೋದಾಗ ವೈಯಕ್ತಿಕ ಮತ್ತು ಸಮವಸ್ತ್ರ ಸ್ವಚ್ಛತೆ ಬಗ್ಗೆ ಗಮನಹರಿಸಬೇಕು ಎಂದು ತಿಳಿವಳಿಕೆ ಮೂಡಿಸಿದ್ದೇವೆ. ನೀವು ಅಷ್ಟೇ ಮನೆಯಲ್ಲಿ ಧೈರ್ಯ ತುಂಬಬೇಕು. ಮಕ್ಕಳಿಗೂ ಧೈರ್ಯ ಹೇಳಬೇಕು. ನಾವು ಮಾಡುತ್ತಿರುವುದು ಒಳ್ಳೆಯ ಕೆಲಸ’.
‘ಜಿಲ್ಲೆಗೆ ಕೊರೊನಾ ಬರದಂತೆ ತಡೆಯಬೇಕಿದೆ. ನಿಮ್ಮ ಜತೆ ಮಾತನಾಡಿದ್ದು ಖುಷಿ ಆಯಿತು’ ಎಂದು ಎಸ್ಪಿ ಹೇಳಿದರು.