ತೋವಿನಕೆರೆ: ಇಲ್ಲಿನ ಬಸ್ ನಿಲ್ದಾಣದಲ್ಲಿ ಶುಕ್ರವಾರ ಅಜ್ಜಿಹಳ್ಳಿಯ ರೈತ ಕುಮಾರ್ ಮಾರಾಟ ಮಾಡುತ್ತಿದ್ದ ಸೊಪ್ಪನ್ನು ಸ್ಥಳೀಯ ತರಕಾರಿ ಅಂಗಡಿಯವರು ಹಾಗೂ ಜನರು ಕಳ್ಳತನ ಮಾಡಿದ ಪ್ರಸಂಗ ಜರುಗಿದೆ.
ರೈತನ ಕಣ್ಣೀರು ಕಂಡ ಪೊಲೀಸರು ಸೊಪ್ಪು ಕದ್ದವರನ್ನು ಹಿಡಿದು ರೈತನಿಗೆ ಧೈರ್ಯ ತುಂಬಿದರು.
ಕುಮಾರ್, ಬಳಿಗ್ಗೆ ಸೊಪ್ಪು ಮಾರಾಟಕ್ಕೆ ಬಂದಿದ್ದರು. ಕಂತೆಯನ್ನು ₹ 20ಕ್ಕೆ ಮಾರಾಟ ಮಾಡುತ್ತಿದ್ದರು. ವ್ಯಾಪಾರಿ ಚೆನ್ನಾಗಿ ನಡೆಯುತ್ತಿತ್ತು. ಇಲ್ಲಿಗೆ ಬಂದ ಸ್ಥಳೀಯ ತರಕಾರಿ ಅಂಗಡಿಯವರು ‘ಸೊಪ್ಪನ್ನು ನಮಗೆ ಕೊಡು. ನಾವು ಮಾರಾಟ ಮಾಡುತ್ತೇವೆ’ ಎಂದರು. ಜಗಳ ತೆಗೆದು ಕೂಗಾಡಿದರು.
ಚೀಲದಲ್ಲಿ ಸೊಪ್ಪನ್ನು ಬಾಚಿಕೊಂಡು ಓಡಲು ಮುಂದಾದರು. ಇನ್ನು ಕೆಲವರು ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಹಣ ನೀಡದೆ ಕಾಲು ಕಿತ್ತರು. ಇದರಿಂದ ಕಂಗಾಲಾದ ಕುಮಾರ್ ಕಣ್ಣೀರು ಹಾಕಿದರು. ಜನರ ಕೂಗಾಟದ ಧ್ವನಿ ಕೇಳಿದ ಪೊಲೀಸರು ಸ್ಥಳಕ್ಕೆ ಬಂದು ಜನರನ್ನು ಚದುರಿಸಿದರು.
ತರಕಾರಿ ಅಂಗಡಿಯವರ ಕೊಂಡೊಯ್ದಿದ್ದ ಸೊಪ್ಪನ್ನು ಕುಮಾರ್ಗೆ ವಾಪಸ್ ಕೊಡಿಸಿ, ವ್ಯಾಪಾರ ಮಾಡುವಂತೆ ಧೈರ್ಯ ತುಂಬಿದರು. ಇನ್ನೂ ಕೆಲವರು ವಾಪಸ್ ಬಂದು ತಾವು ತೆಗೆದುಕೊಂಡು ಹೋಗಿದ್ದ ಸೊಪ್ಪಿನ ಹಣ ನೀಡಿದರು.
ಎಎಸ್ಐ ಶಿವರಾಜು, ಸಿದ್ದಲಿಂಗ ಪ್ರಸನ್ನ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಚಿಕ್ಕರಂಗಯ್ಯ, ಕಂದಾಯ ಇಲಾಖೆ ಆನಂದ, ನಾಗರಾಜು, ಹರೀಶ್, ಸಂಜಯ್ ವ್ಯಾಪಾರವನ್ನು ಸುಸೂತ್ರವಾಗಿ ನಡೆಸಲು ಅವಕಾಶ ಮಾಡಿಕೊಟ್ಟರು.