ತುಮಕೂರು: ಮಹರ್ಷಿ ವಾಲ್ಮೀಕಿ ಸ್ಮರಣಾರ್ಥ ಹರಿಹರ ತಾಲ್ಲೂಕಿನ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ಫೆ.8 ಮತ್ತು 9 ರಂದು ಶ್ರೀಮಠದ 21ನೇ ವಾರ್ಷಿಕೋತ್ಸವ, ಪುಣ್ಯಾನಂದಪುರಿ ಸ್ವಾಮೀಜಿ ಅವರ ಪುಣ್ಯಾರಾಧನೆ, ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರ ಪಟ್ಟಾಧಿಕಾರ ಮಹೋತ್ಸವ ಮತ್ತು ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ನಗರದ ಮಹರ್ಷಿ ವಾಲ್ಮೀಕಿ ವಿದ್ಯಾವರ್ಧಕ ನಿಲಯದ ಹಾಸ್ಟೆಲ್ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ವಾಲ್ಮೀಕಿ ವಿದ್ಯಾವರ್ಧಕ ನಿಲಯದ ಅಧ್ಯಕ್ಷ ಮರಳೂರು ಭೀಮಣ್ಣ ಈ ಬಗ್ಗೆ ಮಾಹಿತಿ ನೀಡಿದರು.
ಜಾತ್ರಾ ಸಮಿತಿ ಅಧ್ಯಕ್ಷ ಹಾಗೂ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಮಹರ್ಷಿ ವಾಲ್ಮೀಕಿ ಗುರುಪೀಠದ ಟ್ರಸ್ಟಿ ಶಾಂತಲಾ ಕೆ.ಎನ್.ರಾಜಣ್ಣ ಮಾತನಾಡಿ,‘ರಾಮಾಯಣದಂತಹ ಮಹಾಕಾವ್ಯ ಬರೆದ ವಾಲ್ಮೀಕಿ ಅವರ ಸ್ಮರಣೆ ಜರುಲಿದೆ. ಜೊತೆಗೆ ಸಾಧಕರನ್ನು ಗೌರವಿಸಲಾಗುತ್ತದೆ’ ಎಂದರು.
ಜಾತ್ರಾ ಕಮಿಟಿ ಅಧ್ಯಕ್ಷ ರಾಮಾಂಜಿನಪ್ಪ,‘ಜಾತ್ರಾ ಮಹೋತ್ಸವದಲ್ಲಿ ಧಾರ್ಮಿಕ, ವೈಚಾರಿಕ, ಸಾಮಾಜಿಕ, ಕೌಟುಂಬಿಕ, ಅಧ್ಯಾತ್ಮ ಮತ್ತಿತರ ವಿಷಯಗಳ ಬಗ್ಗೆ ಗೋಷ್ಠಿಗಳು ನಡೆಯಲಿದೆ’ ಎಂದು ಹೇಳಿದರು.
ಫೆ.9 ರಂದು ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ಧರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಭಾಗವಹಿಸುವರು ಎಂದು ವಿವರಿಸಿದರು.
ಸಭೆಯಲ್ಲಿ ನಿವೃತ್ತ ಪ್ರೊ.ಪುಟ್ಟರಾಮಯ್ಯ, ನೌಕರರ ಸಂಘದ ಅಧ್ಯಕ್ಷ ವೀರಣ್ಣ, ಆರೋಗ್ಯ ಇಲಾಖೆಯ ರಂಗನಾಥ್, ನಿವೃತ್ತ ಮುಖ್ಯ ಶಿಕ್ಷಕ ಟಿ.ಬಿ.ಶ್ರೀನಿವಾಸ್, ಗ್ರಂಥಾಲಯದ ಪುರುಷೋತ್ತಮ್ ಹಾಗೂ ಕೈದಾಳ ರಮೇಶ್ ಇದ್ದರು.