ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ ಸಾಮ್ರಾಜ್ಯ ಎಂಬುದೇ ಸುಳ್ಳು: ಇತಿಹಾಸ ತಜ್ಞ ಡಾ.ವಸುಂಧರಾ ಫಿಲಿಯೋಜ

Last Updated 20 ಫೆಬ್ರುವರಿ 2021, 5:03 IST
ಅಕ್ಷರ ಗಾತ್ರ

ತುಮಕೂರು: ‘ವಿಜಯನಗರ ಸಾಮ್ರಾಜ್ಯ’ ಎಂಬ ಹೆಸರು ಸುಳ್ಳು. ಅದರ ಹೆಸರು ‘ಕರ್ನಾಟಕ ಸಾಮ್ರಾಜ್ಯ’. ಸಮಕಾಲೀನ 26 ಶಾಸನಗಳಲ್ಲಿ ಈ ಹೆಸರು ದಾಖಲಾಗಿದೆ. ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಿ, ವಿಮರ್ಶಿಸಿ ‘ಕರ್ನಾಟಕ ಸಾಮ್ರಾಜ್ಯ’ದ ಇತಿಹಾಸ ರಚಿಸಬೇಕಾಗಿದೆ ಎಂದು ಖ್ಯಾತ ಅಂತರರಾಷ್ಟ್ರೀಯ ಇತಿಹಾಸ ತಜ್ಞ ಪ್ಯಾರಿಸ್‌ನ ಡಾ.ವಸುಂಧರಾ ಫಿಲಿಯೋಜ ಅಭಿಪ್ರಾಯಪಟ್ಟರು.

ಪ್ರಗತಿ ಗ್ರಾಫಿಕ್ಸ್ ಪ್ರಕಟಿಸಿರುವ ಡಿ.ಎನ್.ಯೋಗೀಶ್ವರಪ್ಪ ಅವರು ಹೊರತಂದಿರುವ ‘ಪ್ರಾದೇಶಿಕತೆ: ಕರ್ನಾಟಕದ ಪಾಳೆಯಗಾರರು’ ಮತ್ತು ‘ಪಾವಗಡ ಪಾಳೆಯಗಾರರು’ ಎಂಬ ಎರಡು ಕೃತಿಗಳನ್ನು ಬಿಡುಗಡೆ ಮಾಡಿ ಮಾಡಿದರು.

‘ಕರ್ನಾಟಕ ಸಾಮ್ರಾಜ್ಯದ ರಾಜಧಾನಿ ವಿಜಯನಗರ. ಈಗಿನ ಹಂಪಿ. ಆದರೆ ಅದರ ವೈಭವದ ಕಾಲಕ್ಕೆ ವಿಜಯನಗರ ಎಂಬ ಹೆಸರಿನಿಂದ ಮೆರೆಯಿತು. ಈ ರಾಜ್ಯ ಅಸ್ತಿತ್ವಕ್ಕೆ ಬರಲು ಕಾರಣರಾದವರು ವಿದ್ಯಾರಣ್ಯರು ಅಲ್ಲ. ಬದಲಿಗೆ ವಿದ್ಯಾತೀರ್ಥರು. ವಿದ್ಯಾರಣ್ಯರ ಪ್ರಾರಂಭದ ಹೆಸರು ಮಾಧವಾಚಾರ್ಯ. ನಂತರ ಅವರು ಸನ್ಯಾಸ ದೀಕ್ಷೆ ಪಡೆದು ವಿದ್ಯಾರಣ್ಯರಾದರು. ವಿದ್ಯಾರಣ್ಯರಿಗೂ ಮತ್ತು ವಿಜಯನಗರ ಸ್ಥಾಪನೆಗೂ ಸಂಬಂಧವಿಲ್ಲ. ವಿದ್ಯಾರಣ್ಯರ ಕಥೆಯನ್ನು ಆನಂತರ ಅದರ ಸ್ಥಾಪನೆಯ ಜತೆಗೆ ಸೇರಿಸಲಾಗಿದೆ’ ಎಂದು ಹೇಳಿದರು.

ಹಂಪಿಯಲ್ಲಿ ಸಾಮ್ರಾಜ್ಯ ಆರಂಭವಾದಾಗ ಭುವನೇಶ್ವರಿ ದೇವಿ ಎಂಬುದಿರಲಿಲ್ಲ. ಸರಸ್ವತಿಯ ಹೆಸರಿನಲ್ಲಿ ಪೂಜಿಸುತ್ತಿದ್ದರು. ಪಂಪಾ ಮಹಾತ್ಮೆ ಮತ್ತು ಆ ರಾಜ್ಯದ ಸಮಕಾಲೀನ ಸಾಹಿತ್ಯದಲ್ಲಿಯೂ ಭುವನೇಶ್ವರಿಯ ಹೆಸರು ನಮಗೆ ಸಿಗುವುದಿಲ್ಲ. ಆದ್ದರಿಂದ ಮತ್ತೊಮ್ಮೆ ಸಿಕ್ಕಿರುವ ಎಲ್ಲಾ ದಾಖಲೆಗಳನ್ನು ವಿಮರ್ಶೆಗೆ ಒಳಪಡಿಸಬೇಕಾಗಿದೆ ಎಂದರು.

ಪ್ಯಾರಿಸ್ ವಿಶ್ವವಿದ್ಯಾಲಯ ನಿವೃತ್ತ ಸಂಸ್ಕೃತ ಭಾಷಾ ಸಂಶೋಧಕರಾದ ಫಿಲಿಯೋಜಾ, ‘ಕರ್ನಾಟಕ ಸಾಮ್ರಾಜ್ಯ ಆ ಕಾಲದ ಮೊಗಲರ ಸಾಮ್ರಾಜ್ಯಕ್ಕಿಂತ ಹೆಚ್ಚು ವಿಸ್ತಾರವಾಗಿತ್ತು. ಅವರ ಸಾಮ್ರಾಜ್ಯದಲ್ಲಿ ಅವರದೇ ಆದ ಸೇನೆ ಇತ್ತು. ಪಾಳೇಗಾರರಿಗೆ ಚಕ್ರವರ್ತಿಗಳು ಭೂ ಪ್ರದೇಶಗಳನ್ನು ನೀಡಿ ಅವರ ಅಧಿಕಾರವನ್ನು ಪ್ರತಿಷ್ಠಾಪಿಸಿದ್ದರು. ಚಕ್ರವರ್ತಿಗಳಿಗೆ ಯುದ್ಧದ ಸಮಯದಲ್ಲಿ ಸೈನ್ಯ ಪೂರೈಸುತ್ತಿದ್ದರು. ಈ ಎಲ್ಲಾ ಅಂಶಗಳು ಈ ಕೃತಿಯಲ್ಲಿ ದಾಖಲಾಗಿವೆ’ ಎಂದು ತಿಳಿಸಿದರು.

ಕರ್ನಾಟಕ ಸಾಮ್ರಾಜ್ಯದಲ್ಲಿ ಕೃಷಿ, ಸಣ್ಣ ಕೈಗಾರಿಕೆಗಳಿಗೆ ಆದ್ಯತೆ ನೀಡಲಾಗಿತ್ತು. ಕೆರೆ ಕಟ್ಟಿಸಿದರೆ 100 ಅಶ್ವಮೇಧ ಯಾಗ ಮಾಡಿದ ಪುಣ್ಯ ಲಭಿಸುತ್ತದೆ ಎಂದು ರಾಜರು, ಸಾಮಾನ್ಯರು ನಂಬಿದ್ದರು. ಆದ್ದರಿಂದಲೇ ಆ ಕಾಲದಲ್ಲಿ ಕೆರೆ, ಬಾವಿ, ಕಲ್ಯಾಣಿ ನಿರ್ಮಿಸಲಾಗಿದೆ ಎಂದರು.

ಕೃತಿಗಳ ಲೇಖಕರಾದ ಡಿ.ಎನ್.ಯೋಗೀಶ್ವರಪ್ಪ, ಸಂಶೋಧಕ ಡಾ.ಬಿ.ನಂಜುಂಡಸ್ವಾಮಿ, ಬಿ.ಆರ್.ಉಮೇಶ್, ಟಿ.ಎಸ್.ನಿರಂಜನ್, ಅತ್ತಿ ರೇಣುಕಾನಂದ, ರಾಜೇಶ್, ಜಗದೀಶ್, ಸತೀಶ್ ಹೆಬ್ಬಾಕ, ನಂದೀಶ್ವರ, ಡಿ.ಬಿ.ಶಿವಾನಂದ್, ಚಂದ್ರಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT