ತುಮಕೂರು: ನಗರದ ಸರ್ಕಾರಿ ಬಸ್ ನಿಲ್ದಾಣ ಮುಂಭಾಗದಲ್ಲಿರುವ ಆಟೊ ನಿಲ್ದಾಣಕ್ಕೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಭೇಟಿ ನೀಡಿ ಆಟೊ ಚಾಲಕರ ಸಮಸ್ಯೆ ಆಲಿಸಿದರು.
ಈ ವೇಳೆ ಜ್ಯೋತಿಗಣೇಶ್ ಮಾತನಾಡಿ, ‘ಸಂಚಾರಿ ಪೊಲೀಸರು ಮುಗ್ದ ಆಟೊ ಚಾಲಕರನ್ನು ಗೌರವಯುತ ವಾಗಿ ಬದುಕಲು ಬಿಡಬೇಕು. ಕಾನೂನು ಉಲ್ಲಂಘಿಸುವ ಆಟೊ ಚಾಲಕರಿಗೆ ಕಾನೂನಿನ ನಿಯಮಗಳ ಬಗ್ಗೆ ತಿಳಿಸಿ, ಸರಿದಾರಿಗೆ ತರುವ ಕೆಲಸವನ್ನು ಮಾಡಬೇಕಾಗಿದೆ’ ಎಂದು ತಿಳಿಸಿದರು.
ಆಟೊ ಚಾಲಕರು ಸರ್ಕಾರಕ್ಕೆ ಹೊರೆ ಆಗದಂತೆ, ನಿತ್ಯ ಸಂಪಾದಿಸಿ ಜೀವನ ನಡೆಸುತ್ತಿದ್ದಾರೆ. ಬಹುತೇಕ ಚಾಲಕರು ತಮ್ಮ ಆಟೊಗಳ ಮೇಲೆ ಸಾಲ ಮಾಡಿದ್ದಾರೆ. ಅವರ ಹಿತ ಕಾಪಾಡಬೇಕು ಎಂದರು.
ಪ್ರಯಾಣಿಕರಿಗೆ ಯಾವುದೇ ಕಿರಿಕಿರಿ ಆಗದಂತೆ ಹಾಗೂ ಬಸ್ ಸಂಚಾರಕ್ಕೆ ತೊಂದರೆ ಆಗದಂತೆ ಶಾಂತಿಯುತವಾಗಿ ಪರಸ್ಪರ ಹೊಂದಾಣಿಕೆಯೊಂದಿಗೆ ಆಟೊ ಚಾಲಕರು ಮತ್ತು ಪ್ರಯಾಣಿಕರು, ಬಸ್ ನಿಲ್ದಾಣದವರು ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.