ತುಮಕೂರು: ಯುವಪತ್ರಕರ್ತರು ತಮ್ಮ ಪ್ರಾಯೋಗಿಕ ಕೌಶಲಗಳನ್ನು ಹರಿತಗೊಳಿಸುವುದರಿಂದ ಇಂದಿನ ಮಾಧ್ಯಮಗಳ ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯ ಎಂದು ಪತ್ರಕರ್ತ ಪಿ.ಎಲ್.ಮಾರುತೇಶ್ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು ಇತ್ತೀಚೆಗೆ ಹಮ್ಮಿಕೊಂಡಿದ್ದ ‘ಟೆಲಿವಿಷನ್ ಸುದ್ದಿ ಕೌಶಲಗಳು’ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ಬದಲಾಗುತ್ತಿರುವ ಕಾಲದಲ್ಲಿ ಟಿವಿ ವಾಹಿನಿಗಳು ವೇಗ ಹಾಗೂ ದಕ್ಷತೆ ಬಯಸುತ್ತವೆ. ಪ್ರಚಲಿತ ವಿದ್ಯಮಾನಗಳ ಕುರಿತ ವಿಸ್ತಾರವಾದ ತಿಳಿವಳಿಕೆಯೊಂದಿಗೆ ಟಿವಿ ಕ್ಷೇತ್ರ ಬಯಸುವ ಚುರುಕುತನ ಹಾಗೂ ಕೌಶಲಗಳನ್ನು ಯುವಪತ್ರಕರ್ತರು ಬೆಳೆಸಿಕೊಳ್ಳಬೇಕು ಎಂದರು.
ತರಗತಿಯಲ್ಲಿ ತಿಳಿದುಕೊಳ್ಳುವ ಸೈದ್ಧಾಂತಿಕ ವಿಷಯಗಳ ತಳಹದಿಯಲ್ಲಿ ಪ್ರಾಯೋಗಿಕ ಜ್ಞಾನ ಅಭಿವೃದ್ಧಿಪಡಿಸಿಕೊಳ್ಳಬೇಕು. ಸಿದ್ಧಾಂತ ಮತ್ತು ಪ್ರಯೋಗಗಳ ನಡುವೆ ಸಮತೋಲನ ಸಾಧಿಸುವುದು ಇಂದಿನ ಅಗತ್ಯ ಎಂದು ಹೇಳಿದರು.
ವಿಭಾಗದ ಸಂಯೋಜಕ ಕೆ.ವಿ.ಸಿಬಂತಿ ಪದ್ಮನಾಭ ಮಾತನಾಡಿ, ಕೌಶಲಗಳ ಪರಿಣತಿ ಅಚಾನಕ್ಕಾಗಿ ಸೃಷ್ಟಿಯಾಗುವ ವಿದ್ಯೆಯಲ್ಲ. ಅದಕ್ಕೆ ನಿರಂತರ ಪರಿಶ್ರಮಬೇಕು. ಯಾವುದೇ ಕಲೆಯ ಅಭ್ಯಾಸದಲ್ಲಿ ನಿರಂತರತೆ ಇದ್ದಾಗ ಯಶಸ್ಸು ಕಾಣಲು ಸಾಧ್ಯ ಎಂದು ವಿವರಿಸಿದರು.
ಉಪನ್ಯಾಸಕ ಕೆ.ಎನ್.ಬಾನುಪ್ರಸಾದ್ ಇದ್ದರು. ಟಿವಿ ವಾರ್ತೆಯ ತಯಾರಿ, ಮಂಡನೆ ಹಾಗೂ ಪ್ರಸಾರದ ವಿವಿಧ ಕೌಶಲಗಳ ಬಗ್ಗೆ ಕಾರ್ಯಾಗಾರದಲ್ಲಿ ತರಬೇತಿ ನೀಡಲಾಯಿತು.