ಮಧುಗಿರಿ: ಮನೆಯಲ್ಲಿ ಮದ್ಯ ಮಾರಾ ಟ ಮಾಡುತ್ತಿದ್ದಾನೆಂದು ಆರೋಪಿಸಿ ವಿಚಾರಣೆಗೆಂದು ಪೊಲೀಸ್ ಠಾಣೆಗೆ ಕರೆದೊಯ್ದು ವ್ಯಕ್ತಿಯನ್ನು ಥಳಿಸಿದ್ದರಿಂದ ಸಾವನ್ನಪ್ಪಿದ್ದಾನೆಂದು ಆರೋಪಿಸಿ ದಲಿತಪರ ಸಂಘಟನೆಗಳ ಕಾರ್ಯ ಕರ್ತರು ಉಪವಿಭಾಗಾಧಿಕಾರಿ ಕಚೇರಿ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದರು.
ಪಟ್ಟಣದ ಬೆಂಕಿಪುರದ ನಿವಾಸಿ ರಾಮಣ್ಣ (38) ಸಾವನ್ನಪ್ಪಿದ ವ್ಯಕ್ತಿ. ಡಿ. 30ರಂದು ರಾತ್ರಿ ಮದ್ಯ ಮಾರಾಟ ಆರೋಪ ಮೇಲೆ ಪೊಲೀಸರು ಜೀಪಿನಲ್ಲಿ ಠಾಣೆಗೆ ಕರೆದೊಯ್ದ ಮರುದಿನ ಬಿಡುಗಡೆ ಮಾಡಿದ್ದರು. ಪೊಲೀಸರು ಬಾಸುಂಡೆ ಬರುವಂತೆ ಥಳಿಸಿದ್ದು, ನೋವು ತಾಳಲಾರದೆ ಬುಧವಾರ ರಾತ್ರಿ ಮೃತನಾಗಿದ್ದಾನೆಂದು ಪತ್ನಿ ಶಿವಮ್ಮ ಆರೋಪಿಸಿದರು.
ಈ ಬಗ್ಗೆ ತನಿಖೆ ಕೈಗೊಂಡು ತಪ್ಪಿತಸ್ಧ ಆಧಿಕಾರಿಗಳ ವಿರುದ್ಧ ಕ್ರಮಕೈಗೊಂಡು ಮೃತನ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ದಲಿತ ಮುಖಂಡ ಎಂ.ವೈ. ಶಿವಕುಮಾರ್ ಆಗ್ರಹಿಸಿದರು.
ಎಸ್ಪಿ ಟಿ.ಆರ್.ಸುರೇಶ್ ಭೇಟಿ ನೀಡಿದ್ದು, ತಕ್ಷಣವೇ ದೂರು ದಾಖಲಿಸಿ ತಹಶೀಲ್ದಾರ್ ಮೂಲಕ ತನಿಖೆ ನಡೆಸಿ ಕ್ರಮತೆಗೆದುಕೊಳ್ಳುವ ಭರವಸೆ ನೀಡಿದರು. ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರ ನೀಡುವುದಾಗಿ ಉಪವಿಬಾಗಾಧಿಕಾರಿ ದೀಪ್ತಿ ದಿಲೀಪ್ ಮೆಹಂದಳೆ ತಿಳಿಸಿದರು.
ದಲಿತ ಮುಖಂಡರಾದ ತೆರೆಯೂರು ಅಂಜಯ್ಯ, ಬೆಂಕಿಪುರ ಮಂಜುನಾಥ್, ಸಿದ್ದರಾಜು, ಸಿದ್ದಗಂಗಯ್ಯ, ದೊಡ್ಡೇರಿ ಕಣಿಮಯ್ಯ, ಜಿ.ಸಿ.ತಿಮ್ಮಯ್ಯ, ವಕೀಲ ಶಿವಕುಮಾರ್, ಬೆಂಕಿಪುರ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.