ತುಮಕೂರು: ಕೆಜೆಪಿ ಜೊತೆ ಗುರುತಿಸಿಕೊಂಡಿರುವ ಶಾಸಕರ ವಿರುದ್ಧ ಕ್ರಮಕೈಗೊಳ್ಳಲು ಮುಂದಾದರೆ ಅಥವಾ ಯಡಿಯೂರಪ್ಪ ಬಣದ ಸಚಿವರ ಸ್ಥಾನ ಬದಲಾದರೆ ಸರ್ಕಾರ ಬಿದ್ದುಹೋಗುವುದು ಖಚಿತ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.
ರಾಜ್ಯದಲ್ಲಿ ಈಗ ಇರುವುದು ಕೆಜೆಪಿ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರ. ಇದನ್ನು ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಈಶ್ವರಪ್ಪ ಮತ್ತು ಸದಾನಂದಗೌಡ ತಿಳಿಯಬೇಕು. ಆದರೆ ಅವರಿಬ್ಬರ `ಪಟಾಕಿ ಠುಸ್' ಆಗುತ್ತದೆ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಛೇಡಿಸಿದರು.
ಸರ್ಕಾರ ಉಳಿಸಿಕೊಳ್ಳುವ ಜವಾಬ್ದಾರಿ ಮುಖ್ಯಮಂತ್ರಿ ಮೇಲಿದೆ. ಈ ಬಾರಿಯ ಬಜೆಟ್ ಮಂಡಿಸಬೇಕಾಗಿರುವುದರಿಂದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ. ಸರ್ಕಾರ ಉಳಿದರೆ ಸಾಕು ಎಂಬ ಸ್ಥಿತಿಯಲ್ಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಪಕ್ಷದಿಂದ ಅಮಾನತು ಮಾಡಿರುವುದಾಗಿ ಈಶ್ವರಪ್ಪ ಪ್ರಕಟಿಸಿದ್ದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಆದರೆ ನನಗೆ ಇದುವರೆಗೂ ಪಕ್ಷದಿಂದ ನೋಟಿಸ್ ಬಂದಿಲ್ಲ. ನೋಟಿಸ್ ಬಂದ ನಂತರ ಉತ್ತರ ನೀಡುತ್ತೇನೆ. ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.