ತುಮಕೂರು: ರೈಲ್ವೆ ನಿಲ್ದಾಣದ 1 ಮತ್ತು 2ನೇ ಪ್ಲಾಟ್ ಫಾರ್ಮ್ನಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದರಿಂದ ಬೆಳಿಗ್ಗೆ ಹಿರೇಹಳ್ಳಿಯಿಂದ ಹೊರಡುತ್ತಿದ್ದ ಫಾಸ್ಟ್ ಪ್ಯಾಸೆಂಜರ್ ರೈಲು ಇನ್ನು ಮುಂದೆ ತುಮಕೂರು ರೈಲ್ವೆ ನಿಲ್ದಾಣದಿಂದಲೇ ಹೊರಡಲಿದೆ ರೈಲ್ವೆ ಪ್ರಯಾಣಿಕರ ವೇದಿಕೆ ತಿಳಿಸಿದೆ.
ಈ ಮೊದಲು ಪ್ರತಿ ದಿನ ಬೆಳಿಗ್ಗೆ 8.15ಕ್ಕೆ ತೆರಳುತ್ತಿದ್ದ ಫಾಸ್ಟ್ ಪ್ಯಾಸೇಂಜರ್ ರೈಲಿನ ವೇಳೆ ಬೆಳಿಗ್ಗೆ 8.30ಕ್ಕೆ ಬದಲಾಯಿಸಲಾಗಿತ್ತು. ಇದರಿಂದ ರೈಲಿನಲ್ಲಿ ಸಂಚರಿಸುತ್ತಿದ್ದ ಒಂದೂವರೆ ಸಾವಿರ ಉದ್ಯೋಗಿ ಪ್ರಯಾಣಿಕರಿಗೆ ಅನನುಕೂಲವಾಗುತ್ತಿತ್ತು.
ಅಲ್ಲದೇ ಬೆಂಗಳೂರನ್ನು 10.30ಕ್ಕೆ ರೈಲು ತಲುಪುತ್ತಿದ್ದುದರಿಂದ ಕಚೇರಿಗೆ ಹೋಗುವವರು ವಿಳಂಬಕ್ಕೆ ಅನೇಕರು ನೋಟಿಸ್ ಪಡೆದಿದ್ದರು. ಈ ಸಮಸ್ಯೆಯನ್ನು ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರ ಗಮನಕ್ಕೆ ತಂದು ಪರಿಹರಿಸಲು ಮನವಿ ಮಾಡಲಾಗಿತ್ತು ಎಂದು ವೇದಿಕೆ ತಿಳಿಸಿದೆ.
‘ಮನವಿಗೆ ಸ್ಪಂದಿಸಿದ ಸಂಸದರು ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿ ತುಮಕೂರಿನಿಂದಲೇ ರೈಲು ಹೊರಡುವಂತೆ ಮಾಡಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಿದೆ. ಅಲ್ಲದೇ ಉಪ್ಪಾರಹಳ್ಳಿಯ ಗೇಟ್ ಬಳಿ ರೈಲ್ವೆ ಕೆಳ ಸೇತುವೆ ನಿರ್ಮಾಣ ಕಾಮಗಾರಿ ವೀಕ್ಷಿಸಿ ಕಾಮಗಾರಿ ಬೇಗ ಪೂರ್ಣಗೊಳಿಸಲು ಸಂಸದರು ಸೂಚಿಸಿದ್ದಾರೆ’ ಎಂದು ತುಮಕೂರು–ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆಯ ಸದಸ್ಯರಾದ ಕರಣಂ ರಮೇಶ್ ಮತ್ತು ರಘೋತ್ತಮರಾವ್ ತಿಳಿಸಿದ್ದಾರೆ.