ತಿಪಟೂರು: ಬೀಗ ಹಾಕಿದ್ದ ಮನೆ ಬೀಗ ಮುರಿದು ಬೆಲೆ ಬಾಳುವ ಆಭರಣ ಹಾಗೂ ವಸ್ತುಗಳನ್ನು ಕಳ್ಳರು ದೋಚಿರುವ ಎರಡು ಪ್ರತ್ಯೇಕ ಪ್ರಕರಣ ನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಕುಟುಂಬ ಸಮೇತ ಮೂರು ದಿನಗಳ ಹಿಂದೆ ಮೈಸೂರಿಗೆ ಹೋಗಿದ್ದ ವಿನಾಯಕ ನಗರದ ತಿಮ್ಮೇಗೌಡ ಅವರ ಮನೆ ಬೀಗ ಮುರಿದ್ದು, ಹಣ ಅಭರಣಗಳಿಗಾಗಿ ಬೀರು ಮೊದಲಾದವನ್ನು ಜಾಲಾಡಿರುವ ಕಳ್ಳರು ಕೈಗೆ ಸಿಕ್ಕ ಸುಮಾರು 900 ಗ್ರಾಂ. ಬೆಳ್ಳಿ ಆಭರಣ, ಲ್ಯಾಪ್ಟಾಪ್, ಕ್ಯಾಮೆರಾ, ಮೊದಲಾದವನ್ನು ದೋಚಿದ್ದಾರೆ.
ಮನೆ ಒಡತಿ ರೂಪಾ ಊರಿಗೆ ಹೋಗುವ ಮುನ್ನಾ ಮನೆಯಲ್ಲಿದ್ದ 300 ಗ್ರಾಂ. ಚಿನ್ನಾಭರಣಗಳನ್ನು ಬೀರುವಿನಿಂದ ತೆಗೆದು ಮತ್ತೊಂದು ಸುರಕ್ಷಿತ ಸ್ಥಳದಲ್ಲಿ ಇಟ್ಟು ಹೋದ್ದರಿಂದ ಆ ಚಿನ್ನಾಭರಣ ಕಳ್ಳರ ಪಾಲಾಗದೆ ಸುರಕ್ಷಿತವಾಗಿ ಉಳಿದಿವೆ.
ಮತ್ತೊಂದು ಪ್ರಕರಣದಲ್ಲಿ ಸೋಮವಾರ ಬೆಳಗ್ಗೆ ಬೆಂಗಳೂರಿಗೆ ಹೋಗಿದ್ದ ಶಂಕರಪ್ಪ ಲೇಔಟ್ ನಿವಾಸಿ ವರ್ತಕ ತೋಟಾಂರಾಧ್ಯ ಅವರ ಮನೆ ಬೀಗ ಮುರಿದು, ಕಳ್ಳರು ಮನೆಯಲ್ಲಿದ್ದ ಬೆಳ್ಳಿ ಹಾಗೂ ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರೆ.
ಆಭರಣ ದೋಚಲ್ಪಟ್ಟಿರುವುದು ಖಚಿತವಾದರೂ ಮನೆಯವರೆಲ್ಲ ಬೆಂಗಳೂರಿಂದ ಹಿಂದಿರುಗಿರಲಿಲ್ಲವಾದ್ದರಿಂದ ಸಂಜೆವರೆಗೆ ವಿವರ ಲಭ್ಯವಿರಲಿಲ್ಲ.
ಎರಡು ಪ್ರಕರಣಗಳು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಹೆಚ್ಚಿನ ತನಿಖೆಗಾಗಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿಕೊಳ್ಳಲಾಗಿದೆ.