ಉಡುಪಿ: ದೊಡ್ಡಣಗುಡ್ಡೆ ಸಮೀಪ ಗುರುವಾರ ಮಧ್ಯರಾತ್ರಿ ದುಷ್ಕರ್ಮಿಗಳು ಯುವಕನಿಗೆ ಚೂರಿ ಇರಿದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಶರತ್ ದೇವಾಡಿಗ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ದೀಪಕ್, ಸಾಗರ್ ಎಂಬುವರನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಿಸಿದ್ದ ಮೂರು ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪರಾರಿಯಾಗಿರುವ ನಾಲ್ವರ ಬಂಧನಕ್ಕೆ ನಗರ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಚೂರಿ ಇರಿಯಲಾಗಿದ ಎಂಬ ಮಾಹಿತಿ ಲಭ್ಯವಾಗಿದೆ.
ಗುರುವಾರ ರಾತ್ರಿ ಮಲ್ಪೆ ಬೀಚ್ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದಾಗ ಶರತ್ ಹಾಗೂ ಕೆಲವು ಯುವಕರ ಮಧ್ಯೆ ಗಲಾಟೆಯಾಗಿದೆ. ಈ ಸಂದರ್ಭ ಸ್ಥಳೀಯರು ಮಧ್ಯೆಪ್ರವೇಶಿಸಿ ಜಗಳ ಬಿಡಿಸಿ ಸಮಾಧಾನಪಡಿಸಿ ಕಳುಹಿಸಿದ್ದಾರೆ. ನಂತರ, ಕಾರ್ಯಕ್ರಮ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಶರತ್ ಮೇಲೆ ದೊಡ್ಡಣಗುಡ್ಡೆ ಬಳಿ ದಾಳಿ ನಡೆಸಲಾಗಿದೆ. ಚಾಕುವಿನಿಂದ ಹೊಟ್ಟೆಗೆ ಇರಿಯಲಾಗಿದೆ. ಶರತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.