ಉಡುಪಿ: ‘ಇತಿ, ಮಿತಿ ಇಲ್ಲದ ಆಹಾರ ಸೇವೆನೆಯೇ ಎಲ್ಲ ಕಾಯಿಲೆಗಳಿಗೆ ಮೂಲ’ ಎಂದು ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ತಿಳಿಸಿದರು.
ಭಾನುವಾರ ಆದರ್ಶ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಎಂ.ಆರ್.ಐ ಸ್ಕ್ಯಾನಿಂಗ್ ಸೆಂಟರ್ನ ಉದ್ಘಾಟನೆ ಮತ್ತು ಎನ್.ಎ.ಬಿ.ಎಚ್. ಮಾನ್ಯತಾ ಪ್ರಮಾಣ ಪತ್ರ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಆರೋಗ್ಯ ಹಾಗೂ ರೋಗ ಎರಡೂ ಮನುಷ್ಯನ ಕೈಯಲ್ಲಿದೆ. ಆದ್ದರಿಂದ ಅತಿಯಾದ ಆಹಾರ ಸೇವನೆ ರೋಗರುಜಿನಗಳಿಗೆ ಕಾರಣವಾಗುತ್ತದೆ. ನಾಲಿಗೆ ಹಿಡಿತದಲ್ಲಿದ್ದರೆ ಆರೋಗ್ಯವು ಹಿಡಿತದಲ್ಲಿರುತ್ತದೆ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಅಂತೆಯೇ ನಾಲಿಗೆ ಮತ್ತು ಮಾನಸಿಕ ಸ್ವಚ್ಛತೆ ಕಾಪಾಡಿಕೊಂಡಲ್ಲಿ ಸ್ವಚ್ಛ ಭಾರತ, ಸ್ವಸ್ಥ ಭಾರತವಾಗಲಿದೆ’ ಎಂದು ಹೇಳಿದರು.
‘ಆದರ್ಶ ಆಸ್ಪತ್ರೆ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿದೆ. 2005ರಲ್ಲಿ ಆರಂಭಗೊಂಡ ಆಸ್ಪತ್ರೆ ವೈದ್ಯಕೀಯ ಸಮುದಾಯದಲ್ಲಿ ಮಾದರಿಯಾಗಿ ಬೆಳೆಯುತ್ತಿದೆ. ವೈದ್ಯಕೀಯ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತ, ತಜ್ಞ ವೈದ್ಯ, ನುರಿತ ಸಿಬ್ಬಂದಿಯನ್ನು ಒಳಗೊಂಡು ಗುಣಮಟ್ಟದ ಆರೋಗ್ಯ ಸೇವೆಯನ್ನು ಜನತೆಗೆ ನೀಡುತ್ತಿದೆ. ಮುಂದೆ ಇನ್ನಷ್ಟು ಉತ್ತಮ ಆರೋಗ್ಯ ಸೇವೆ ಆಸ್ಪತ್ರೆ ನೀಡಲಿ’ ಎಂದರು.
ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಮಾತನಾಡಿ, ‘ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವಲ್ಲಿ ಆದರ್ಶ ಆಸ್ಪತ್ರೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಹಂತ ಹಂತವಾಗಿ ಬೆಳೆಯುವ ಮೂಲಕ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಸಂತಸದ ವಿಚಾರ. ಕೇಂದ್ರ, ರಾಜ್ಯ ಸರ್ಕಾರದ ಆರೋಗ್ಯ ಯೋಜನೆಗಳಿಗೆ ಪೂರಕವಾಗಿ ಆದರ್ಶ ಆಸ್ಪತ್ರೆಯಲ್ಲಿ ಬಡಜನರಿಗೆ ಆರೋಗ್ಯ ಸೇವೆ ಸಿಗುತ್ತಿದೆ’ ಎಂದರು.
ಆದರ್ಶ ಆಸ್ಪತ್ರೆಯ ಡಾ.ಜಿ.ಎಸ್ ರಾಜಶೇಖರ್ ಅವರಿಗೆ ಆರೋಗ್ಯ ಸಂಸ್ಥೆಗಳ ಮೌಲ್ಯಮಾಪನಾ ಮಂಡಳಿ ನೀಡಿರುವ ಎನ್ಎಬಿಎಚ್ ಮಾನ್ಯತಾ ಪ್ರಮಾಣ ಪತ್ರವನ್ನು ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಹಸ್ತಾಂತರಿಸಿದರು.
ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಸಿಂಡಿಕೇಟ್ ಬ್ಯಾಂಕ್ನ ಜನರಲ್ ಮ್ಯಾನೆಜರ್ ಭಾಸ್ಕರ ಹಂದೆ, ಜಾನ್.ಡಿ.ಅಲ್ಮೇಡ, ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ, ಬ್ಲಾಸಂ ಉಪಸ್ಥಿತರಿದ್ದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್ ಸ್ವಾಗತಿಸಿದರು. ಡಿಯಾಗೊ ಕ್ವಾಡ್ರಸ್ ಕಾರ್ಯಕ್ರಮ ನಿರ್ವಹಿಸಿದರು. ಆಸ್ಪತ್ರೆಯ ಎಚ್ಆರ್ ಮ್ಯಾನೇಜರ್ ಕಾವ್ಯಶ್ರೀ ವಂದಿಸಿದರು.